ಬೆಂಗಳೂರು: ಪ್ರತಿ ವರ್ಷ ನಡೆಯುವಂತೆ ಈ ಬಾರಿಯೂ ಸಹ ಕರ್ನಾಟಕ ಚಲನಚಿತ್ರ ಕ್ರಿಕೆಟ್ ಪಂದ್ಯಾವಳಿಗೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿದ್ದು. ಇಷ್ಟು ದಿನ ತೆರೆ ಮೇಲೆ ಮಿಂಚುತ್ತಿದ್ದ ಸ್ಯಾಂಡಲ್ ವುಡ್ ತಾರೆಯರು ಇನ್ಮೇಲೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ. ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿಯ 3ನೇ ಆವೃತ್ತಿಯು ಫೆಬ್ರವರಿ 11 ಮತ್ತು 12 ರಂದು ಆರಂಭವಾಗಲಿದ್ದು, 6 ತಂಡಗಳ ನಡುವೆ ನೇರ ಸೆಣಸಾಟ ನಡೆಯಲಿದೆ.
ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಂಘಟಕರು ಮುಂದಾಗಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಟೂರ್ನಿ ನಡೆಯಲಿದ್ದು, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೆಟ್ರಿಯೊಟ್ಸ, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್ , ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ ಸೇರಿದಂತೆ ಒಟ್ಟು ಆರು ತಂಡಗಳು ಮೈದಾನಕ್ಕೀಳಿಯಲಿವೆ.
ನಿರ್ಮಾಪಕ ಕಾರ್ತಿಕ್ ಗೌಡ, ಕೆ. ಪಿ ಶ್ರೀಕಾಂತ್, ನಂದಕಿಶೋರ್, ದಿನಕರ್ ತೂಗುದೀಪ, ಮತ್ತಿತರರು ಟೂರ್ನಿ ಆಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ. ಡಾ. ಶಿವರಾಜಕುಮಾರ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್(ಜೆಕೆ), ಡಾರ್ಲಿಂಗ್ ಕೃಷ್ಣ, ಪ್ರದೀಪ್, ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾರ್ತಿಕ್ ಗೌಡ, ಕೆ. ಪಿ ಶ್ರೀಕಾಂತ್, ನಂದಕಿಶೋರ್, ದಿನಕರ್ ತೂಗುದೀಪ ಮತ್ತಿತರರು ಪಂದ್ಯಾವಳಿಯ ಆಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ.