ಬಾಗಲಕೋಟೆ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಸಂಪ್ರದಾಯಿಕ ಕಂಬಳಿ ನೇಯುವ ಉದ್ಯೋಗವನ್ನು ಬಾಗಲಕೋಟೆ ಜಿಲ್ಲೆಯ ಗೋಪನಕೊಪ್ಪ ಗ್ರಾಮದಲ್ಲಿ ಸಾಕಷ್ಟು ಜನ ಅವಲಂಬಿಸಿದ್ದರು. ಹಾಗಾಗಿ ಈ ಗ್ರಾಮ ಕಂಬಳಿಗೆ ಫೇಮಸ್ ಆಗಿತ್ತು. ಆದ್ರೀಗ ಕೇವಲ ಎರಡು ಮಗ್ಗಗಳು ಮಾತ್ರ ಉಳಿದಿದೆ. ಕಾರಣ ಇದರಿಂದ ನೇಕಾರರಿಗೆ ಆದಾಯ ಸಿಗುತ್ತಿಲ್ಲ. ಹೌದು, ಈ ಗ್ರಾಮದಲ್ಲಿ ಸುಮಾರು 60 ರಿಂದ 70 ಕುಟುಂಬಗಳು ಕಂಬಳಿ ನೇಯುತ್ತಿದ್ದರು. ಒಂದು ಕಂಬಳಿ ತಯಾರು ಮಾಡಲು ಒಂದು ವಾರ ಬೇಕಾಗುತ್ತದೆ. ಒಂದು ಕಂಬಳಿಗೆ 4 ರಿಂದ 5 ಸಾವಿರಗಳವರೆಗೆ ಬೆಲೆ ಇದೆ. ಕೆಲವರು ಮನೆಗೆ ಬಂದು ಖರೀದಿಸುತ್ತಿದ್ದರು. ಆದ್ರೀಗ ಕಚ್ಚಾ ವಸ್ತು ಉಣ್ಣೆ ಬೆಲೆಯು ಹೆಚ್ಚಾಗಿದ್ದು, ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹಾಗೂ ಬೇಡಿಕೆ ಕೂಡ ಕಡಿಮೆಯಾಗಿದೆ. ಇನ್ನು ಮಹಿಳೆಯರು ಚರಕದ ಮೂಲಕ ಸುತ್ತಿ ಉಣ್ಣೆಯಿಂದ ದಾರ ಮಾಡಿಕೊಡುತ್ತಾರೆ. ಅವರಿಗೆ 2 ಸಾವಿರ ವೇತನ ನೀಡಬೇಕು, ಉಳಿದ 2 ಸಾವಿರದಲ್ಲಿ ಕಚ್ಚಾ ವಸ್ತು ಹಾಗೂ ಇತರ ವೆಚ್ಚವನ್ನು ನೋಡಿಕೊಳ್ಳಬೇಕು. ಹಾಗಾಗಿ ಪ್ರತಿವಾರ ಒಂದು ಸಾವಿರ ಉಳಿಯುತ್ತದೆ. ತಿಂಗಳಿಗೆ ಕೇವಲ 4 ರಿಂದ 5 ಸಾವಿರ ಆದಾಯ ಬರುತ್ತಿದ್ದು, ಇದರಿಂದ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ನೇಕಾರರು ಹೇಳುತ್ತಾರೆ. ಸರ್ಕಾರದಿಂದ ಉಣ್ಣೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ರು, ಸರಿಯಾಗಿ ಪೂರೈಕೆ ಮಾಡದ ಹಿನ್ನೆಲೆ, ಜೊತೆಗೆ ಕಂಬಳಿ ಮಾರಾಟದ ಮಾರುಕಟ್ಟೆ ವ್ಯವಸ್ಥೆ ಆಗದ ಕಾರಣ ಮಾರಾಟ ಕಡಿಮೆ ಆಗಿದೆ. ಕಂಬಳಿ ನೇಯುವವರು ಕಡಿಮೆ ಆದಾಯ ಬರುವುದರಿಂದ ಈ ಉದ್ಯೋಗ ಬಿಟ್ಟು ಬೇರೆ ಉದ್ಯೋಗ ಅವಲಂಬಿಸಿದ್ದಾರೆ.