ತುಮಕೂರು, ಡಿ.21 : ವಿಪರೀತ ಜ್ವರ, ಪ್ರಜ್ಞಾಹೀನತೆ, ದೃಷ್ಟಿದೋಷ ಉಂಟಾಗುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ವಿಶೇಷವಾಗಿ ಮಕ್ಕಳಲ್ಲಿ, ಬಾಲಕರಲ್ಲಿ ಈ ರೋಗ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಲಕ್ಷಕ್ಕೊಬ್ಬರಿಗೆ ಈ ರೋಗ ತಗಲುವ ಸಾಧ್ಯತೆ ಇದೆ ಎಂದು ಮಹಾನಗರ ಪಾಲಿಕೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮೆದುಳು ಜ್ವರ ಪತ್ತೆಯಾಗುತ್ತಿದ್ದಂತೆ ನಗರದಾದ್ಯಂತ ಹೆಚ್ಚಿರುವ ಹಂದಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಆಯುಕ್ತ ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಕಲ್ಪತರು ನಾಡು ತುಮಕೂರಿನಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿದ್ದು , ಸಾರ್ವಜನಿಕರನ್ನು ಭಯಭೀತಿಗೊಳಿಸಿದೆ. ಬಡ್ಡಿಹಳ್ಳಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕನಿಗೆ ಜ್ವರ ಕಾಣಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಆತನಿಗೆ ಮೆದುಳು ಜ್ವರ ಇರುವುದು ದೃಢಪಟ್ಟಿದೆ. ಬಾಲಕನಿಗೆ ಮೆದುಳು ಜ್ವರ ಇರುವುದು ಸ್ಪಷ್ಟವಾಗುತ್ತಿದ್ದಂತೆ ಜಿಲ್ಲಾ ಕೀಟಶಾಸ್ತ್ರಜ್ಞೆ ಡಾ.ಉಷಾ ಮತ್ತಿತರ ವೈದ್ಯಾಧಿಕಾರಿಗಳ ತಂಡ ಬಡ್ಡಿಹಳ್ಳಿಯಲ್ಲಿರುವ ಬಾಲಕನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂದಿಗಳ ಮೇಲೆ ಕೂರುವ ಸೊಳ್ಳೆಗಳಿಂದ ಮೆದುಳು ಜ್ವರ ಬರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲ ಪ್ರದೇಶಗಳ ಕೆಲವು ಹಂದಿಗಳನ್ನು ಹಿಡಿದು ರಕ್ತ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.