ಧಾರವಾಡ, ಅ. 25 : ಪ್ರಗತಿಪರ ಚಿಂತಕ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಹಾಜರುಪಡಿಸುವಂತೆ ಸೂಚಿಸಿದ ಧಾರವಾಡ 3 ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ನ.11ಕ್ಕೆ ವಿಚಾರಣೆ ಮುಂದೂಡಿದೆ. ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳು ಆರೋಪಿ ಪ್ರವೀಣ ಚತುರನನ್ನು ಎಸ್ಐಟಿ ಪೊಲೀಸರು ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿದರು. ಆದರೆ ಉಳಿದ ಐವರು ಆರೋಪಿಗಳನ್ನು ಹಾಜರುಪಡಿಸದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಯಿತು. ಅ. 17ರಂದು ಹುಬ್ಬಳ್ಳಿಯ ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿ, ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ, ಶರತ್ ಬಾಹುಸಾಹೇಬ್ ಕಳಾಸ್ಕರ್ನನ್ನು ಮುಂಬಯಿ ಜೈಲಿನಿಂದ ಹಾಗೂ ಬೆಳಗಾವಿಯ ಪ್ರವೀಣ ಚತುರನನ್ನು ಧಾರವಾಡ ಜೈಲಿನಿಂದ ಕರೆತಂದು ಹಾಜರುಪಡಿಸಲಾಗಿತ್ತು.