ಬೆಂಗಳೂರು, ಆ. 25 : ಕಲಬುರಗಿಯಲ್ಲಿ .181 ಕೊಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಶನಿವಾರ ಹಸ್ತಾಂತರ ಮಾಡುವ ಮೂಲಕ ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಿದೆ.
ವಿಮಾನ ನಿಲ್ದಾಣ ಹಸ್ತಾಂತರದಿಂದ ಇನ್ನು ಮುಂದೆ ಕಲಬುರಗಿಯಿಂದ ಬೆಂಗಳೂರು, ತಿರುಪತಿ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ನಡುವೆ ವಿಮಾನಯಾನ ಸೇವೆ ಸಿಗಲಿದೆ.
ವಿಧಾನಸೌಧದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಕಾರ್ಯಕಾರಿ ನಿರ್ದೇಶಕ ಎನ್.ಆರ್.ಎನ್ ಸಿಂಹ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದ ಅರ್ಕಿಟೆಕ್ಟ್ ನಿರ್ದೇಶಕ ಎ.ಜಿ.ಜೋಷಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸಮ್ಮುಖದಲ್ಲಿ ಸಹಿ ಮಾಡುವ ಮೂಲಕ ನೂತನ ವಿಮಾನ ನಿಲ್ದಾಣವನ್ನು ಹಸ್ತಾಂತರಿಸಿದರು.