ಚಿಕ್ಕೋಡಿ, ಆ. 12 : ಜೀವಭಯ ಅನ್ನೋದು ಎಲ್ಲರಿಗೂ ಒಂದೇ. ಚಿಕ್ಕೋಡಿಯಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮೊಸಳೆಯೊಂದು ಮನೆ ಮೇಲೆ ಏರಿ ಕುಳಿತಿದೆ. ಆಪತ್ತು ಬಂದಾಗ ಹೇಗಾದ್ರೂ ಜೀವ ರಕ್ಷಣೆ ಮಾಡಿಕೊಳ್ಳೋಕೆ ಕಸರತ್ತು ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ತನ್ನ ಜೀವ ಉಳಿಸಿಕೊಳ್ಳಲು ಪರದಾಡಿದ ಮೊಸಳೆಯೊಂದು ಪ್ರವಾಹದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮನೆಯ ಮೇಲ್ಛಾವಣಿ ಏರಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಅಜಿತ ನಗರದಲ್ಲಿ ಬೃಹತ್ ಮೊಸಳೆ ಮನೆಯ ಮೇಲೇರಿ ಕುಳಿತಿದ್ದು, ಪ್ರಾಣ ರಕ್ಷಿಸಿಕೊಳ್ಳಲು ಮೊಸಳೆ ನಡೆಸಿದ ಪ್ರಯತ್ನ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಂದಾಜು 10 ಅಡಿ ಉದ್ದವಿರುವ ಮೊಸಳೆ ಪ್ರವಾಹದ ಭೀತಿಗೆ ನಲುಗಿ ಹೋಗಿದ್ದು, ಮಹಡಿ ಮೇಲೇರಿ ಕುಳಿತು ರಕ್ಷಣೆಗಾಗಿ ಕಾದಿರುವಂತಿರೋದು ಪ್ರವಾಹದ ಭೀಕರತೆಗೆ ಹಾಗೂ ಪ್ರಾಣಿಗಳ ಅಸಹಾಯಕತೆಗೆ ಸಾಕ್ಷಿ ಒದಗಿಸುವಂತಿದೆ.