ಶಿರಾ: ಜನಪ್ರತಿನಿಧಿ ಅಲ್ಲದೆ ಇರುವ ಮಾಜಿ ಸಚಿವರು ಆಡಳಿತಾತ್ಮಕ ಸಮಿತಿ ಅಧ್ಯಕ್ಷರ ಖುರ್ಚಿಯಲ್ಲಿ ಕೂರುವುದು ದುರಹಂಕಾರದ ಪರಮಾವಧಿ, ಕೂಡಲೇ ಕೃಷಿ ಮಾರುಕಟ್ಟೆ ಸಮಿತಿ ಕ್ಷಮೆ ಯಾಚಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ ಆಗ್ರಹಿಸಿದ್ದಾರೆ.
ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಪಿಎಂಸಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇರವಾಗಿ ಸಭಾಂಗಣಕ್ಕೆ ಬಂದು ರೈತ ಪ್ರತಿನಿಧಿಗಳಿಂದ ಆಯ್ಕೆಯಾದ ಅಧ್ಯಕ್ಷರ ಖುರ್ಚಿಯಲ್ಲಿ ಕುಳಿತು ಅನೌಪಚಾರಿಕ ಸಭೆ ನಡೆಸಿದ್ದಾರೆ. ಇದು ಖಂಡನೀಯ! ಹಿರಿಯ ಅನುಭವಿ ರಾಜಕಾರಣಿಯಾಗಿ, ಮಾಜಿ ಕಾನೂನು ಸಚಿವರಾಗಿ ಈ ರೀತಿ ನಡೆದುಕೊಳ್ಳುವ ಇವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲವೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಮುಂದಿನ ಚುನಾವಣೆ ದೃಷ್ಟಿ ಇಟ್ಟುಕೊಂಡು ಬಂದಿರುವ ಇವರಿಗೆ ರೈತ ಸಮುದಾಯ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ಉಪಾಧ್ಯಕ್ಷ ರಾಮರಾಜು, ನಿರ್ದೇಶಕ ಮನೋಹರ್ ನಾಯ್ಕ, ಲಲಿತಮ್ಮ, ರಾಘವೇಂದ್ರ ಮುಂತಾದವರು ಇದ್ದರು.
ಎಪಿಎಂಸಿ ಯಾರ್ಡ್ನಲ್ಲಿ ಅಧ್ಯಕ್ಷರ ಹಾಗೂ ನಿರ್ದೇಶಕರ ಸಭಾಂಗಣ ಪ್ರತ್ಯೇಕವಾಗಿದ್ದು, ಮಾಜಿ ಸಚಿವರು ಸಭೆ ನಡೆಸಿದ ಕೊಠಡಿ ಎಪಿಎಂಸಿಯ ಹರಾಜು ಕೊಠಡಿಯಾಗಿದೆ. ಅವರು ಕುಳಿತ ಟೇಬಲ್ ಮೇಲಾಗಲಿ ನಿಗದಿತ ಸ್ಥಳದಲ್ಲಾಗಲಿ ಅಧ್ಯಕ್ಷ, ಉಪಾಧ್ಯಕ್ಷರ ನಾಮಫಲಕ ಇಲ್ಲದಿರುವ ಬಗ್ಗೆ ಕೆಲ ಸ್ಥಳೀಯರು ಮಾಧ್ಯಮಗಳ ಗಮನಕ್ಕೆ ತಂದಿದ್ದು ಮಾತ್ರವಲ್ಲದೇ ಇದೊಂದು ವಿವಾದಿತ ವಿಷಯವೇ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.