ಬೆಳಗಾವಿ: ಲೋಕಸಭಾ ಚುನಾವಣೆಗೆ ಎರಡು ಕ್ಷೇತ್ರಗಳ ಟಿಕೆಟ್ ಮಿಸ್ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಇದರಿಂದ ಹಾಲಿ ಸಂಸದೆ ಮಂಗಳಾ ಸುರೇಶ್ ಅಂಗಡಿಯವರಿಗೆ ಬಿಜೆಪಿ ಶಾಕ್ ನೀಡಿದೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಚುನಾವಣಾ ಕಣ ರಂಗೇರಿದ್ದು ಈ ನಡುವೆ ಈಗಾಗಲೇ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಕೆಲ ಹಾಲಿ ಸಂಸದರಿಗೆ ಟಿಕೆಟ್ ನೀಡದೇ ಹೊಸಮುಖಗಳಿಗೆ ಮಣೆ ಹಾಕಿದೆ. ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೂ ಟಿಕೆಟ್ ಕೈತಪ್ಪುವ ಆತಂಕವಿತ್ತು. ಆದರೆ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಈ ಕುರಿತು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಲೋಕಸಭಾ ಟಿಕೆಟ್ ಫೈನಲ್ ಆಗಿದೆ. ಶೆಟ್ಟರ್ ಗೆ ಟಿಕೆಟ್ ಫೈನಲ್ ಆಗಿದೆ ಎಂದು ಗೊತ್ತಾಗಿ ನಾವು ದೆಹಲಿಯಿಂದ ವಾಪಾಸ್ ಆಗಿದ್ದೇವೆ ಎಂದಿದ್ದಾರೆ.
ಬಿಜೆಪಿ ಎರಡನೇ ಲಿಸ್ಟ್ ನಲ್ಲಿ ನಮ್ಮ ಕುಟುಂಬದ ಹೆಸರು ಇರಲಿಲ್ಲ. ಹಾಗಾಗಿ ನಾವು ಹೈಕಮಾಂಡ್ ಭೇಟಿಯಾಗಿದ್ದೆವು. ಜಗದೀಶ್ ಶೆಟ್ಟರ್ ಮೊದಲು ಬೆಳಗಾವಿಯಿಂದ ಟಿಕೆಟ್ ಬೇಡ ಎಂದಿದ್ದರು. ಅವರು ಧಾರವಾಡ ಅಥವಾ ಹಾವೇರಿ ಟಿಕೆಟ್ ಕೇಳಿದ್ದರು.ಆದರೆ ವರಿಷ್ಠರು ಬೆಳಗಾವಿಯಿಂದ ನೀವೇ ನಿಂತುಕೊಳ್ಳಿ ಎಂದು ಹೇಳಿದ್ದರಂತೆ. ಹಾಗಾಗಿ ಶೆಟ್ಟರ್ ಗೆ ಬೆಳಗಾವಿ ಟಿಕೆಟ್ ಫೈನಲ್ ಆಗಿದೆ.