ನವದೆಹಲಿ, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ”ಭಾರತೀಯ ವಾಯು ಪಡೆ ಪಾಕಿಸ್ಥಾನದೊಳಗಿನ ಉಗ್ರ ಶಿಬಿರಗಳ ಮೇಲೆ ನಡೆಸಿರುವ ಬಾಂಬ್ ದಾಳಿಯನ್ನು ವಿದೇಶಿ ಮಾಧ್ಯಮಗಳು ಸುಳ್ಳೆಂದು ವರದಿ ಮಾಡಿವೆ. ಆದುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ನಡೆಸಿರುವ ವಾಯು ದಾಳಿಗಳು ನಿಜವೇ ಸುಳ್ಳೇ. ನಿಜವೆಂದಾದರೆ ದಾಳಿಯಲ್ಲಿ ಸತ್ತಿರುವ ಉಗ್ರರ ಸಂಖ್ಯೆ ನಿಖರವಾಗಿ ಎಷ್ಟು ಎಂಬುದನ್ನು ತಿಳಿಸಬೇಕು” ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
”ಭಾರತೀಯ ವಾಯು ಪಡೆ ದಾಳಿಯಲ್ಲಿ ಮೃತಪಟ್ಟಿರುವರೆನ್ನಲಾದ ಉಗ್ರರ ಸಂಖ್ಯೆಯನ್ನು ಒಬ್ಬೊಬ್ಬ ಬಿಜೆಪಿ ನಾಯಕರು ಒಂದೊಂದು ರೀತಿಯಾಗಿ ನೀಡುತ್ತಿದ್ದಾರೆ. ದಾಳಿ ನಡೆದ ದಿನ ಮೃತ ಉಗ್ರರ ಸಂಖ್ಯೆ 350 ಎಂದು ಹೇಳಲಾಗಿತ್ತು. ಅನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೃತ ಉಗ್ರರ ಸಂಖ್ಯೆ 250 ಎಂದು ಹೇಳಿದರು. ಹಾಗಿರುವಾಗ ಮೃತ ಉಗ್ರರ ಸಂಖ್ಯೆ ನಿಖರವಾಗಿ ಎಷ್ಟು ಎನ್ನುವ ಬಗ್ಗೆ ಗೊಂದಲವಿದೆ. ಆದುದರಿಂದ ಪ್ರಧಾನಿ ಮೋದಿ ಈ ಗೊಂದಲವನ್ನು ನಿವಾರಿಸಿ ನಿಖರ ಅಂಕೆ-ಸಂಖ್ಯೆಯನ್ನು ನೀಡಬೇಕು” ಎಂದು ದಿಗ್ವಿಜಯ್ ಸಿಂಗ್ ಹೇಳಿದರು.
”ಅಮಿತ್ ಶಾ ಅವರಿಗಿಂತ ಮೊದಲು ಹಿರಿಯ ಬಿಜೆಪಿ ನಾಯಕ ಎಸ್.ಎಸ್.ಅಹ್ಲುವಾಲಿಯಾ ಅವರು ಐಎಎಫ್ ದಾಳಿಯಲ್ಲಿ ಯಾವನೇ ಉಗ್ರ ಸತ್ತಿಲ್ಲ ಎಂದು ಕೂಡ ಹೇಳಿದ್ದರು. ಈಗ ವಿದೇಶೀ ಮಾಧ್ಯಮಗಳು ಐಎಎಫ್ ನಿಂದ ವಾಯು ದಾಳಿಯೇ ನಡೆದಿಲ್ಲ ಎಂದು ವರದಿ ಮಾಡುತ್ತಿವೆ” ಎಂದು ದಿಗ್ವಿಜಯ್ ಸಿಂಗ್ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.