ಕಿತ್ತು ತಿನ್ನುವ ಬಡತನದ ನಡುವೆ ಸಾಧನೆಯ ಹಾದಿ ಹಿಡಿದ ರಾಯಚೂರಿನ ಗ್ರಾಮೀಣ ಪ್ರತಿಭೆ
ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲಟ ಗ್ರಾಮದ ಮಲ್ಲಮ್ಮ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದು ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ್ದಾರೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕುಟುಂಬದ ಜವಾಬ್ದಾರಿ ಹೊತ್ತ ತಂದೆಯ ಸಾವಿನ ನೋವು, ಜೊತೆಗೆ ಹೆಗಲ ಮೇಲೆ ಕುಟುಂಬದ ಹೊರೆ. ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆ ಏನಾದರೂ ಸಾಧಿಸಬೇಕೆಂಬ ಹಟದಲ್ಲಿದ್ದಾಗಲೇ ಕರಾಟೆ ಎಂಬ ಕ್ರೀಡೆಗೆ ಮಲ್ಲಮ್ಮ ಆಕರ್ಷಿತರಾದರು.
ಚಿಕ್ಕವಯಸ್ಸಿನಲ್ಲೇ ಕರಾಟೆಯಲ್ಲಿ ಭಾಗವಹಿಸುತ್ತಾ ಪರಿಶ್ರಮಪಟ್ಟು ಉನ್ನತ ಸ್ಪರ್ಧೆವರೆಗೆ ಹೋಗಿದ್ದಾರೆ. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ 26-27 ವರ್ಷದೊಳಗಿನ ವಯೋಮಿತಿಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಿಲ್ವರ್ ಪದಕ ಪಡೆದು ಸಾಧನೆ ಮಾಡಿದ್ದಾರೆ.
ತಾಲೂಕು ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಬಂಗಾರದ ಪದಕ ಪಡೆದುದಲ್ಲದೆ ಇತ್ತೀಚಿಗೆ ಅಂತಾರಾಷ್ಟೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.