ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕುತೂಹಲ ಕೆರಳಿಸುತ್ತಿದೆ. ನಿನ್ನೆ ನಡೆದ 29ನೇ ಪಂದ್ಯದಲ್ಲಿ ರೋಹಿತ್ ನಾಯಕತ್ವದ ಭಾರತ ತಂಡ ಬಟ್ಲರ್ ಅವರ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು.
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಂಗ್ಲರು ರೋಹಿತ್ ಪಡೆಯ ಅಬ್ಬರಕ್ಕೆ 100 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಇಂಗ್ಲೆಂಡ್ ತಂಡವನ್ನು 100 ರನ್ಗಳಿಂದ ಮಣಿಸಿದ ಟೀಂ ಇಂಡಿಯಾಕ್ಕೆ ಏಕದಿನ ವಿಶ್ವಕಪ್ನಲ್ಲಿ ಆಂಗ್ಲರ ವಿರುದ್ಧ ಇದು ದಾಖಲೆಯ ಗೆಲುವಾಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ ಸೋಲುಗಳಿಂದ ತತ್ತರಿಸಿರುವ ಇಂಗ್ಲೆಂಡ್ ಐದನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಹಾಗೆಯೇ ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿಶ್ವಕಪ್ ಪ್ರಯಾಣವೂ ಮುಗಿದಿದೆ ಎಂದೇ ಹೇಳಬಹುದು.
ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಿರೀಕ್ಷೆಯಂತೆ ಇಂಗ್ಲೆಂಡ್ ಭಾರತವನ್ನು 229 ರನ್ಗಳಿಗೆ ಸೀಮಿತಗೊಳಿಸಿತು. ಹಾಗಾಗಿ ಈ ಗುರಿಯನ್ನು ಇಂಗ್ಲೆಂಡ್ ತಂಡ ಸುಲಭವಾಗಿ ಸಾಧಿಸಲಿದೆ ಎಂದು ಕ್ರೀಡಾಭಿಮಾನಿಗಳು ಭಾವಿಸಿದ್ದರು. ಆದರೆ ಭಾರತದ ಬೌಲರ್ಗಳು ಇಂಗ್ಲೆಂಡಿನ ಬ್ಯಾಟಿಂಗ್ ವಿಭಾಗವನ್ನು ಅಕ್ಷರಶಃ ಕಾಡಿದರು. ಗೆಲುವಿಗಾಗಿ 230 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಬಂದಷ್ಟೇ ವೇಗವಾಗಿ ಪೆವಲಿಯನ್ ಸೇರಿಕೊಂಡಿತು. ತಂಡದ ಯಾವೊಬ್ಬ ಬ್ಯಾಟ್ಸ್ಮನ್ಗೂ 30 ಕ್ಕಿಂತ ಹೆಚ್ಚು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್ಗಳ ಕರಾರುವಕ್ಕಾದ ದಾಳಿಗೆ ನಲುಗಿದ ಇಂಗ್ಲೆಂಡ್ 129 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕಳೆದ ಟಿ20 ವಿಶ್ವಕಪ್ನ 10 ವಿಕೆಟ್ಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಮೂರನೇ ಬಲಿಯಾಗಿ ಮೊಹಮ್ಮದ್ ಶಮಿ ಮೊಯಿನ್ ಅಲಿಯವರನ್ನು ಔಟ್ ಮಾಡಿದರೆ, ಕ್ರಿಸ್ ವೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ಏಳನೇ ಹೊಡೆತ ನೀಡಿದರು. 27 ರನ್ಗಳಿಸಿ ತಂಡದ ಪರ ಏಕಾಂಹಿ ಹೋರಾಟ ನೀಡಿದ ಲಿವಿಂಗ್ಸ್ಟೋನ್ರನ್ನು ಔಟ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಎಂಟನೇ ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಅವರು ಆದಿಲ್ ರಶೀದ್ ಅವರನ್ನು ಔಟ್ ಮಾಡಿ ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಪಡೆದರು. ಕೊನೆಯ ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.