ಬೆಂಗಳೂರು, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಐಟಿ ಅಧಿಕಾರಿಗಳ ದಾಳಿಯ ವೇಳೆ ತಲೆಮರೆಸಿಕೊಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನಾರಾಯಣಗೌಡ ಬಿ.ಪಾಟೀಲ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಲಾಗುವುದು ಎಂದು ಐಟಿ ತನಿಖಾ ತಂಡ ಎಚ್ಚರಿಕೆ ನೀಡಿದೆ.
ಐಟಿ ಕಾಯ್ದೆ ಸೆಕ್ಷನ್ 142/1 ಹಾಗೂ 143/2 ಪ್ರಕಾರ ನಾರಾಯಣಗೌಡ ಬಿ. ಪಾಟೀಲ್ ವಿರುದ್ಧ ಮೊಕದ್ದಮೆ ದಾಖಲಿಸಿರುವ ಐಟಿ ತಂಡ ತನಿಖಾ ವೇಳೆ ಸಿಕ್ಕಿಬಿದ್ದಿರುವ ಒಂದೂವರೆ ಕೋಟಿ ಹಣದ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದೆ.
ಕೊಠಡಿ ಸಂಖ್ಯೆ 103 ಮತ್ತು 105ರಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣಗೌಡ ಅವರಿಗೆ ಸೇರಿದ ಸುಮಾರು ಒಂದೂವರೆ ಕೋಟಿ ಅಧಿಕ ಮೊತ್ತದ ನಗದು ಪತ್ತೆಯಾಗಿತ್ತು.
ಈ ವೇಳೆ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ತಲೆಮರೆಸಿಕೊಂಡಿರುವ ನಾರಾಯಣಗೌಡ ಎಲ್ಲಿದ್ದಾರೆ ಎಂಬುದು ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ದಾಳಿ ನಡೆಸಿದ ವೇಳೆ ಐಟಿಯ ಮತ್ತೊಂದು ತಂಡ ಹಾವೇರಿಯಲ್ಲೂ ದಾಳಿ ನಡೆಸಿ 25 ಲಕ್ಷ ನಗದು, ಬ್ಯಾಂಕ್ ಖಾತೆ ಪುಸ್ತಕಗಳು, ಆಸ್ತಿಪಾಸ್ತಿ, ಮೊಬೈಲ್, ಕಂಪ್ಯೂಟರ್ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು.