ಬಳ್ಳಾರಿ, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣಾ ಅಕ್ರಮ ಹಣ ವಹಿವಾಟಿನ ಮೇಲೆ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ನಿನ್ನೆ ತಡರಾತ್ರಿ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರ ಆಪ್ತರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ನಕ್ಷತ್ರ ಹೊಟೇಲ್ ನಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ, ಮಾಜಿ ಸಚಿವ ಅನಿಲ್ ಲಾಡ್ ಆಪ್ತರು ವಾಸ್ತವ್ಯ ಹೂಡಿದ್ದರು. ಅವರ ರೂಮ್ಗಳ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿ ಸೇರಿದಂತೆ 6 ಜನ ಐಟಿ ಅಧಿಕಾರಿಗಳ ತಂಡ ಹೊಟೇಲ್ನ ಪ್ರತಿ ರೂಮ್ಗಳನ್ನು ಪರಿಶೀಲಿಸಿ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಐಟಿ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಹೊಟೇಲ್ಗೆ ಪ್ರವೇಶಿಸಲು ಮುಂದಾದರು. ಆದರೆ ಅವರನ್ನು ಒಳ ಬಿಡದೆ ವಾಪಸ್ ಕಳುಹಿಸಿ ಶೋಧ ಮುಂದುವರಿಸಿದರು. ದಾಳಿ ವೇಳೆ ಮಾಜಿ ಸಚಿವ ಅನಿಲ್ ಲಾಡ್ ಕೂಡ ಹೊಟೇಲ್ನಲ್ಲೇ ತಂಗಿದ್ದರು. ಅವರ ರೂಮ್ಗಳನ್ನು ಸಹ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.