ಚೆನ್ನೈ, ಮೇ . 16, ನ್ಯೂಸ್ ಎಕ್ಸ್ ಪ್ರೆಸ್: ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲಹಾಸನ್ ಅವರು, ನಾನು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ ಹೊರತು ಯಾರೊಂದಿಗೂ ಜಗಳವಾಡಲು ನಾನು ಆ ರೀತಿ ಹೇಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ‘ಗಾಂಧೀಜಿಯನ್ನು ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆ ಮೊದಲ ಹಿಂದು ಉಗ್ರ’ ಎಂಬ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿ ಈ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದ ಕಮಲ ಹಾಸನ್ ‘ನನ್ನ ಹೇಳಿಕೆಯನ್ನು ವಿಚಾರದ ಹೊರಗೆ ಕೊಂಡೊಯ್ಯಲಾಗಿದೆ’ ಎಂದಿದ್ದಾರೆ.
‘ನಾನೇನು ಹೇಳಿದ್ದೇನೋ ಅದರ ತಲೆ ಮತ್ತು ಬಾಲವನ್ನು ಕತ್ತರಿಸಿ ಬರೀ ಒಂದು ಭಾಗವನ್ನು ಮಾತ್ರ ಬಿತ್ತರಿಸಲಾಗಿದೆ. ನನ್ನ ಹೇಳಿಕೆಯನ್ನು ತಿರುಚಿ ಆಕ್ರೋಶ ಹೊರಹೊಮ್ಮುವಂತೆ ಮಾಡಲಾಗಿದೆ. ಯಾವೆಲ್ಲಾ ಐಪಿಸಿ ಸೆಕ್ಷನ್ ಗಳಿವೆ ಅವುಗಳೆಲ್ಲವನ್ನೂ ನನ್ನ ಮೇಲೆ ಹಾಕಲಾಗಿದೆ ಎಂದು ಹೇಳಿದರು.