ಬೆಂಗಳೂರು, ಆ. 30: ಮುಂದಿನ ತಿಂಗಳು 6 ರ ನಂತರ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚದಿದ್ದರೆ ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸುವುದಾಗಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.
ರಸ್ತೆಗಳಲ್ಲಿ ಒಂದು ಗುಂಡಿಯೂ ಇರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ೮ ವಲಯಗಳ ಮುಖ್ಯ ಇಂಜಿನಿಯರ್ ಮತ್ತು ರಸ್ತೆ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಸೆ.6 ರಿಂದ 198 ವಾಡ್೯ಗಳಲ್ಲಿ ಅನಿರೀಕ್ಷಿತ ತಪಾಸಣೆ ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅವೈಜ್ಞಾನಿಕ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿರುವುದು ಕಂಡು ಬಂದರೆ ಸಂಭಂದಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
8 ವಲಯಗಳಲ್ಲಿನ ಇಂಜಿನಿಯರ್ ಗಳ ಜೊತೆ ಸಭೆ ನಡೆಸಿ, ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ರಸ್ತೆಗಳ ದುರಸ್ತಿ ಕೆಲಸವನ್ನು ಗುತ್ತಿಗೆದಾರರಿಂದಲೇ ಮಾಡಿಸುವಂತೆ ಸೂಚನೆ ನೀಡಿದ್ದಾರೆ.
ರಸ್ತೆಯಲ್ಲಿ ಗುಂಡಿಗಳು ಉಂಟಾಗಿ, ಸಾರ್ವಜನಿಕರು ಸಹಾಯ ವಾಣಿ ಆಪ್ ನಲ್ಲಿ ದಾಖಲಿಸಿರುವ ದೂರುಗಳನ್ನು ಸಂಗ್ರಹಿಸಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳವಂತೆ ಮೇಯರ್ ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಪ್ರದಾನ ಅಭಿಯಂತರ ಎಂ.ಆರ್ ವೆಂಕಟೇಶ್ ಅವರು ಮಾತನಾಡಿ ನಿರ್ವಹಣಾ ಅವದಿ ಇನ್ನೂ ಬಾಕಿಯಿರುವ ರಸ್ತೆಗಳಲ್ಲಿ ಗುತ್ತಿಗೆದಾರರಿಂದಲೇ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ. ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಿಸಿರುವ ಕಡೆ ಇಂಜಿಯರ್ ಗಳಿಗೆ ತಲಾ ಒಂದು ಸಾವಿರ ದಂಡ ವಿಧಿಸಲಾಗುವುದು ಎಂದು ಎಂದು ಮೇಯರ್ ಗಮನಕ್ಕೆ ತಂದರು. ರಸ್ತೆ ವಿಭಾಗದ ಮುಖ್ಯ ಇಂಜಿನಿಯರ್ ಸೋಮಶೇಖರ್, ರಸ್ತೆ ಯೋಚನಾ ವಿಭಾಗದ ಮುಖ್ಯ ಇಂಜಿನಿಯರ್ ರಮೇಶ್ ಹಾಜರಿದ್ದರು.