ಕ್ರೈಸ್ಟ್ಚರ್ಚ್ (ನ್ಯೂಜಿಲ್ಯಾಂಡ್), ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಅಲ್ ನೂರ್ ಮಸೀದಿಯಲ್ಲಿ ಪಾತಕಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾದವರಿಗೆ ಐಸಿಸಿ ಸಂತಾಪ ಸೂಚಿಸಿದೆ.
ಈ ಬಗ್ಗೆ ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ಸನ್ ಕ್ರೈಸ್ಟ್ ಚರ್ಚ್ನ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಗೆ ಬಲಿಯಾದವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ನಾಳಿನ ಪಂದ್ಯ ರದ್ದು ಮಾಡಿರುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಿಂದ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ಕ್ರಿಕೆಟ್ ತಂಡ ನಾಳೆಯಿಂದ ನ್ಯೂಜಿಲ್ಯಾಂಡ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯ ಆಡಬೇಕಿತ್ತು. ಆದ್ರೆ ಇಂದು ನಡೆದ ಗುಂಡಿನ ದಾಳಿಯಿಂದ ಟೆಸ್ಟ್ ಪಂದ್ಯವನ್ನ ರದ್ದುಗೊಳಿಸಲಾಗಿದ್ದು, ಬಾಂಗ್ಲಾ ತಂಡ ತವರಿಗೆ ವಾಪಾಸ್ ಆಗುವ ಸಾಧ್ಯತೆ ಇದೆ.
ಸದ್ಯ ಎಲ್ಲ ಕ್ರಿಕೆಟ್ ಆಟಗಾರರನ್ನ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು, ನಾವು ಕ್ರಿಕೆಟ್ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಟ್ವೀಟ್ ಮಾಡಿದೆ.