ಏ. 18, ನ್ಯೂಸ್ ಎಕ್ಸ್ ಪ್ರೆಸ್: ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹು ಮುಖ್ಯವೆಂದು ತಿಳಿದವರು ಹೇಳುತ್ತಾರೆ. ಆದರೆ ಕೆಲವರು ಈಗಲೂ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಂಬುದು ಈ ಘಟನೆಯಿಂದ ಬೆಳಕಿಗೆ ಬಂದಿದ್ದು, ಇದಕ್ಕಾಗಿ ಘೋರ ಕುಕೃತ್ಯವೊಂದು ನಡೆದು ಹೋಗಿದೆ. ಇಂತಹ ಒಂದು ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, 20 ವರ್ಷದ ಮಹಿಳೆಯೊಬ್ಬಳು ತನ್ನ ಗಂಡ ಮಲಗಿದ್ದ ವೇಳೆ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ತನ್ನ ಗಂಡ ಕಪ್ಪಗಿದ್ದಾನೆಂಬ ಅಸಹನೆಯೇ ಇದಕ್ಕೆ ಕಾರಣವೆನ್ನಲಾಗಿದೆ. ಪ್ರೇಮ್ ಶ್ರೀ ವಿವಾಹ ಸತ್ಯವೀರ್ ಸಿಂಗ್ ಎಂಬಾತನೊಂದಿಗೆ 2 ವರ್ಷಗಳ ಹಿಂದೆ ನೆರವೇರಿದ್ದು ದಂಪತಿಗೆ ಐದು ತಿಂಗಳ ಮಗಳಿದ್ದಾಳೆ. ಮದುವೆಯಾದಾಗಿನಿಂದಲೂ ತನ್ನ ಗಂಡ ಕಪ್ಪಗಿದ್ದಾನೆಂಬ ಕೊರಗು ಹೊಂದಿದ್ದ ಪ್ರೇಮ್ ಶ್ರೀ ಏಪ್ರಿಲ್ 15 ರಂದು ಬೆಳಗಿನ ಜಾವ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಆತ ಸಾವನ್ನಪ್ಪಿದ ಆರೋಪಿಗೂ ಸುಟ್ಟ ಗಾಯಗಳಾಗಿವೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.