ಹೆತ್ತ ಮಗ ವಿವಾಹಿತೆಯೋರ್ವಳೊಂದಿಗೆ ಪರಾರಿಯಾಗಿದ್ದಾನೆ ಎಂಬ ಸುದ್ದಿ ತಿಳಿದು ಆತನ ತಂದೆ-ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿಯಲ್ಲಿ ನಡೆದಿದೆ.
ಕಲ್ಲಿಗೌಡನದೊಡ್ಡಿ ಗ್ರಾಮದ ಸಿದ್ದರಾಜು(52), ಸಾಕಮ್ಮ(42) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ.
ಅವರ ಮಗ ಮನು ಎಂಬಾತ ಅದೇ ಗ್ರಾಮದ ವಿವಾಹಿತೆಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ. ಇಬ್ಬರು ಈಗ ನಾಪತ್ತೆ ಆಗಿದ್ದಾರೆ. ಆತನೇ ಕರೆದುಕೊಂಡ ಹೋಗಿದ್ದಾನೆ ಎಂದು ವಿವಾಹಿತೆಯ ಕುಟುಂಬಸ್ಥರು ಹುಡುಗನ ಮನೆ ಮುಂದೆ ಗಲಾಟೆ ಮಾಡಿದ್ದರಂತೆ. ಇದರಿಂದ ಮನನೊಂದ ಆತನ ತಂದೆ-ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ, ಅವರಿಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆ ಮಾಡಲಾಗಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಮೃತದೇಹಗಳನ್ನು ಕನಕಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.