ಬೆಂಗಳೂರು: ಬಿಸಿಲ ಬೇಗೆಯಿಂದ ಬಳಲಿದ್ದ ಕರ್ನಾಟಕದಲ್ಲಿ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ರಾಜ್ಯದಲ್ಲಿ ತಡವಾಗಿ ಆರಂಭವಾದ ಪೂರ್ವ ಮುಂಗಾರು ಮಳೆ ತುಸು ತಂಪೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಿನ್ನೆ ಮಳೆಯಾಗಿದೆ. ಈ ಮಧ್ಯೆ, ಸಿಡಿಲು ಬಡಿದು ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ರಾಕೇಶ್ ಕೊನೆಯುಸಿರೆಳೆದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಗಾಳಿ, ಮಳೆಯಿಂದ ಅವಾಂತರವನ್ನೇ ಸೃಷ್ಟಿಸಿದೆ. ಕುಣಿಗಲ್ ತಾಲೂಕಿನ ಡಿ. ಹೊಸಹಳ್ಳಿಯಲ್ಲಿ ಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಮರಗಳು ನೆಲಸಮವಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡರಾತ್ರಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಮಳೆ ಕಾಟ ನೀಡಿದೆ. ಡಿಸಿಎಂ ಡಿಕೆ ಭಾಷಣ ಮುಗಿಸಿ, ಸಿಎಂ ಮಾತು ಆರಂಭಿಸ್ತಿದ್ದಂತೆ ವರುಣ ಅಬ್ಬರಿಸಿದ್ದಾನೆ. ರಕ್ಷಣೆಗಾಗಿ ಜನರು ಪರದಾಡಿದದ್ರು. ಕೊನೆಗೆ ಪ್ಲಾಸ್ಟಿಕ್ ಚೇರ್ಗಳನ್ನೇ ಆಶ್ರಯ ಪಡೆದು, ಸಿಎಂ ಭಾಷಣ ಆಲಿಸಿದರು.
ಬೆಂಗಳೂರಿನ ಕೆಂಗೇರಿ, ಕುಂಬಳಗೋಡು, ಯಲಹಂಕ ಸುತ್ತಮುತ್ತಲಿನ ಜನ ಈ ವರ್ಷದ ಮೊದಲ ಮಳೆ ಕಂಡು ಖುಷಿಯಾದರು. ಹಲವೆಡೆ ತುಂತುರು ಹನಿಗಳು ಮಂದಹಾಸ ಮೂಡಿಸಿದವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲೂ ಮಳೆರಾಯನ ದರ್ಶನವಾಯ್ತು.
ಈ ಮಧ್ಯೆ, ಮುಂದಿನ 2 ದಿನ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ