ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದಿದ್ದು, ಬಂಡಾಯದ ಬಿಸಿ ಜೋರಾಗಿದೆ. ಮತ್ತೊಂದೆಡೆ ತನ್ನಿಂದಲೇ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರ ರಚನೆಗೆ ಕಾರಣನಾದೆನೆಂದು ಹೇಳಿ ಬಿಂಬಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ನಡವಳಿಕೆ ವಿರುದ್ಧ ಮಿತ್ರಮಂಡಳಿಯವರೇ ತಿರುಗಿಬಿದ್ದಿದ್ದಾರೆ.
ವರಿಷ್ಠರ ಮಧ್ಯಪ್ರವೇಶವಿಲ್ಲದೆ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಬೆಳವಣಿಗೆ ತೀರ ಸಂಚಲನ ಸೃಷ್ಟಿಸಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ಗೆ ಮಂತ್ರಿ ಸ್ಥಾನ ಕೊಡಿಸಲು ಹಠಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ವಿರುದ್ಧ ಮಿತ್ರಮಂಡಳಿಯ ಶಾಸಕರೇ ತಿರುಗಿಬಿದಿದ್ದಾರೆ.ಸಚಿವರಾದ ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಭೈರತಿ ಬಸವರಾಜ್, ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ನಾರಾಯಣಗೌಡ, ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯ ಮುನಿರತ್ನ ಸೇರಿದಂತೆ ಮತ್ತಿತರರು ಖಾಸಗಿ ಹೋಟೆನಲ್ಲಿ ತಡರಾತ್ರಿವರೆಗೂ ಸಭೆ ನಡೆಸಿ ಬಿಜೆಪಿಗೆ ಬಂದಿರುವವರಿಗೆ ಮೊದಲು ಮಂತ್ರಿ ಸ್ಥಾನ ನೀಡಬೇಕೆ ಹೊರತು ಚುನಾವಣೆಯಲ್ಲಿ ಸೋತವರಿಗಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಯೋಗೇಶ್ವರ್ ಅಥವಾ ರಮೇಶ್ ಜಾರಕಿಹೊಳಿ ನೋಡಿಕೊಂಡು ಬಿಜೆಪಿಗೆ ಬಂದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ನಮ್ಮನ್ನು ಕಡೆಗಣಿಸಿದ್ದರಿಂದ ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಗೆದ್ದಿದ್ದೇವೆ. ಯಾವುದೋ ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಮಂತ್ರಿ ಸ್ಥಾನ ತ್ಯಾಗ ಮಾಡಿದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರುಗಳಿಗೆ ಮೊದಲು ಸಚಿವ ಸ್ಥಾನ ಕೊಡಿಸಬೇಕು.