ಬೆಂಗಳೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಅನಾದಿ ಕಾಲದಿಂದಲೂ ಮನೆ ಮದ್ದಾಗಿ ಜೀರಿಗೆಯನ್ನು ಬಳಸುತ್ತಿದ್ದರು ಮತ್ತು ಈಗಲೂ ಬಳಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಒಳಗೊಂಡ ಮಸಾಲೆ ಪದಾರ್ಥವಾಗಿರುವ ಜೀರಿಗೆ ಹಲವು ರೋಗಗಳಿಗೆ ರಾಮಬಾಣ.
ಜೀರಿಗೆ ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಮಧುಮೇಹ, ರಕ್ತದೊತ್ತಡ, ಚರ್ಮವ್ಯಾಧಿ, ಜಂತು ಹುಳ ಬಾಧೆ, ವಾತ, ಉರಿ ಮೂತ್ರ, ನೆಗಡಿ, ಕೆಮ್ಮು ಮುಂತಾದವುಗಳಿಗೆ ಜೀರಿಗೆ ಉತ್ತಮ ಮನೆ ಮದ್ದು.
ಉದರ ಸಂಬಂಧಿ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಶಮನ ಮಾಡುವ ಶಕ್ತಿ ಹೊಂದಿರುವ ಜೀರಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಸಿಡಿಟಿಯನ್ನು ದೂರ ಮಾಡುತ್ತದೆ. ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ಪಿತ್ತ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
ಇನ್ನು ಜೀರಿಗೆಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಮಾಯವಾಗುತ್ತದೆ. ಹೊಟ್ಟೆಯುಬ್ಬರ ಕಾಣಿಸಿಕೊಂಡಾಗ 1ಲೋಟ ನೀರಿಗೆ 2 ಚಮಚದಷ್ಟು ಹುರಿದ ಜೀರಿಗೆ ಹಾಕಿ ಅದನ್ನು ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು. ಮತ್ತೆ ಅದಕ್ಕೆ ಸ್ವಲ್ಪ ಉಪ್ಪು ಮತ್ತು ತುಪ್ಪ ಬೆರೆಸಿ ಕುಡಿದರೆ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
ಪ್ರತಿದಿನ ಜೀರಿಗೆ ನೀರು ಅಥವಾ ಜೀರಿಗೆ ಕಷಾಯ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹಾಗೂ ಇದರ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ. ಬಾಣಂತಿಯರು ಜೀರಿಗೆ ನೀರು ಸೇವಿಸುವುದರಿಂದ ಎದೆ ಹಾಲು ಜಾಸ್ತಿಯಾಗುತ್ತದೆ ಮತ್ತು ಇದರಿಂದ ಮಗುವಿಗೆ ಯಾವುದೇ ತರಹದ ಉದರ ಸಮಸ್ಯೆಗಳು ಬರುವುದಿಲ್ಲ.