ಬೆಂಗಳೂರು, ಡಿ. 28: ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆ ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಸರ್ಕಾರವು ಜಾರಿಗೊಳಿಸುವ ಆರೋಗ್ಯ ಯೋಜನೆಗಳ ಬಗ್ಗೆ ಕಲಾವಿದರಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ಆರೋಗ್ಯ ಇಲಾಖೆಯ ನಿರ್ದೇಶಕರಾದ ಡಾ. ಪಾಟೀಲ್ ಓಂ ಪ್ರಕಾಶ್ ತಿಳಿಸಿದರು.
ಇಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಎನ್. ಎಸ್. ಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾವಿದರ ತರಬೇತಿ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಮೂಲಕ ಆರೋಗ್ಯದ ಬಗ್ಗೆ ಜಾರಿಯಾಗುವ ಯೋಜನೆಗಳು ಹಾಗೂ ಖಾಯಿಲೆಗಳು ಹರಡದಂತೆ ಮುಂಜಾಗ್ರತೆ ಕ್ರಮ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಡಿಸೆಂಬರ ೨೮ ರಿಂದ ೩೦ರ ವರೆಗೆ ವಿವಿಧ ಕಲಾ ಪ್ರಕಾರಗಳ ಕಲಾವಿದರಿಗಾಗಿ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಜಿ. ಎ.ಶ್ರೀನಿವಾಸ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಎಲ್ಲಾ ಜನತೆಗೆ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆಯಾದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು ಎಂಬುವ ಉದ್ದೇಶದಿಂದ ಇಲಾಖೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ಕಾರಣ ಕುಷ್ಟ ರೋಗ ಹಾಗೂ ಮಲೇರಿಯಾ ಕಾಯಿಲೆಯು ನಿರ್ಮೂಲನ ಹಂತದಲ್ಲಿದೆ ಎಂದರು.
ಸಮಾರಂಭದಲ್ಲಿ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಕುಮಾರ್, ರಾಜ್ಯ ಮಟ್ಟದ ಐ. ಇ. ಸಿ ಅಧಿಕಾರಿಗಳಾದ ರಾಜಹನುಮಯ್ಯ, ಷಣ್ಮುಖಸ್ವಾಮಿ, ಜಿಲ್ಲಾ ಮಟ್ಟದ ವಿವಿಧ ಕಾರ್ಯಕ್ರಮ ಅಧಿಕಾರಗಳು ಹಾಗೂ ಜಾನಪದ ಕಲಾವಿದರು ಉಪಸ್ಥಿತರಿದ್ದರು.