ಮಂಡ್ಯ: ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುವ ಕರ್ನಾಟಕದ 14 ಕ್ಷೇತ್ರಗಳಿಗೆ ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿತ್ತು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮಂಡ್ಯದಿಂದ ಎಚ್ಡಿ ರೇವಣ್ಣ ಅವರು ಸಹ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅರೇ ಇದೇನಿದು ತಮ್ಮ ಕುಮಾರಸ್ವಾಮಿ ವಿರುದ್ಧವೇ ಅಣ್ಣ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರಾ ಎಂದು ಅಚ್ಚರಿಯಾಗಬಹುದು.
ಎಚ್.ಡಿ.ರೇವಣ್ಣ ಎಂದಾಕ್ಷಣ ಕುಮಾರಸ್ವಾಮಿ ಅವರ ಅಣ್ಣ ಎಂದು ಅನೇಕರು ಭಾವಿಸಬಹುದು. ಆದರೆ ಎಚ್ಡಿಕೆ ಸಹೋದರ ಎಚ್.ಡಿ.ರೇವಣ್ಣ ಅಲ್ಲ. ಅದೇ ಹೆಸರಿಗೆ ವ್ಯಕ್ತಿಯೊಬ್ಬರು ಸ್ಪರ್ಧೆಗಿಳಿದಿದ್ದಾರೆ. ಹೌದು.. ಎಚ್.ಡಿ.ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.