ಚಂಡೀಗಢ, ಅ. 28 : ಹರಿಯಾಣ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಮನೋಹರ್ಲಾಲ್ ಖಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿ ಜನನಾಯಕ ಜನತಾಪಾರ್ಟಿ (ಜೆಜೆಪಿ) ಅಧ್ಯಕ್ಷ ದುಷ್ಯಂತ್ ಚೌಟಾಲ ನಿನ್ನೆ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಸತ್ಯದೇವೋ ನಾರಾಯಣ ಆರ್ಯ ಅವರು ಖಟ್ಟರ್ ಮತ್ತು ದುಷ್ಯಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ದೀಪಾವಳಿ ಹಬ್ಬದ ನಂತರ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ನಿನ್ನೆ ಖಟ್ಟರ್ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು. ನಂತರ ಕಿಂಗ್ಮೇಕರ್ ಪಕ್ಷ ಜೆಜೆಪಿ ನಾಯಕ ದುಷ್ಯಂತ್, ಸತ್ಯದೇವೋ ನಾರಾಯಣ ಆರ್ಯ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಪತ್ರವನ್ನು ಸಲ್ಲಿಸಿದ್ದರು.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ-40, ಜೆಜೆಪಿ-10 ಮತ್ತು ಪಕ್ಷೇತರರು -7 ಒಟ್ಟು 57 ಸ್ಥಾನಗಳೊಂದಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 31 ಸ್ಥಾನ ಗಳಿಸಿರುವ ಕಾಂಗ್ರೆಸ್ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ.