ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಅತ್ಯಂತ ದೊಡ್ಡ ಆಟವಾಗಿ ಬೆಳೆದಿದ್ದೆ. ಅದರಲ್ಲಿಯೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಅತಿ ಹೆಚ್ಚು ಸುದ್ದಿಯಾಗುತ್ತದೆ. ಕಳೆದ ಕೆಲವು ದಿನಗಳಿಂದ ಭರ್ಜರಿ ಸುದ್ದಿಯಲ್ಲಿರುವ ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಇದೀಗ ದೊಡ್ಡ ಆಘಾತ ಉಂಟಾಗಿದೆ. ಗುಜರಾತ್ ಟೈಟಾನ್ಸ್ ಪ್ರಾಂಚೈಸಿ ತೊರೆದು ಮುಂಬೈ ಇಂಡಿಯನ್ಸ್ ಸೇರಿದ ಬೆನ್ನಲ್ಲೇ ಪಾಂಡ್ಯಗೆ ಹಿನ್ನಡೆ ಆಗಿದೆ.
ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಅವರು ಪಾದದ ಅಸ್ಥಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಅವರಿನ್ನೂ ಗುಣಮುಖರಾಗದ ಕಾರಣ ಕನಿಷ್ಠ ಒಂದು ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಂಡ್ಯ ಗಾಯಗೊಂಡಿದ್ದರು.
ಗಾಯಕ್ಕೆ ತುತ್ತಾದ ನಂತರ ಪಾಂಡ್ಯ ಅವರು ವಿಶ್ವಕಪ್ನಿಂದ ಹೊರಗುಳಿದಿದ್ದರು. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಆಯ್ಕೆ ಆಗಿರಲಿಲ್ಲ. ಇದೀಗ ಹಾರ್ದಿಕ್ ಕನಿಷ್ಠ ನಾಲ್ಕು ವಾರಗಳ ಕಾಲ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ಅವರು ಡಿಸೆಂಬರ್ನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ.