ನವದೆಹಲಿ, ಮಾರ್ಚ್ 29, ನ್ಯೂಸ್ ಎಕ್ಸ್ ಪ್ರೆಸ್: 2015ರ ಪಾಟೀದಾರ್ ಚಳವಳಿಯ ಸಮಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಎನಿಸಿರುವ ಪಾಟೀದಾರ್ ಸಮುದಾಯದ ನಾಯಕ, ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರ ಸಂಸತ್ ಪ್ರವೇಶ ಕನಸಿಗೆ ಕೋರ್ಟ್ ಆದೇಶ ಅಡ್ಡಿಪಡಿಸುತ್ತಿದೆ.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ವಿಸ್ನಗರ್ ನ್ಯಾಯಾಲಯವು ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ಪರಿಗಣಿಸಿ, 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಗುಜರಾತ್ ಹೈಕೋರ್ಟಿನಲ್ಲಿ ಹಾರ್ದಿಕ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮೇಲ್ಮನವಿ ತಿರಸ್ಕೃತಗೊಂಡಿದೆ. ಜನಪ್ರತಿನಿಧಿಗಳ ಕಾಯ್ದೆ 1951ರ ಅನ್ವಯ ಅಪರಾಧಿ ಎನಿಸಿರುವುದರಿಂದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.