ಬೆಂಗಳೂರು, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಅಮೃತಕ್ಕೆ ಸಮಾನದ ಜೇನುತುಪ್ಪದ ರುಚಿಯನ್ನು ಸವಿಯದವರಾರು ಹೇಳಿ..? ಆಯುರ್ವೇದ ಚಿಕಿತ್ಸೆಯಲ್ಲಿ ಮುಖ್ಯ ಸ್ಥಾನ ಪಡೆದಿರುವ ಜೇನುತುಪ್ಪದ ಹೊರತಾಗಿ ಆಯುರ್ವೇದ ಚಿಕಿತ್ಸೆಯನ್ನು ಊಹಿಸುವುದು ಕೂಡ ಕಷ್ಟ.
ದೇಹದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವ ಜೇನು ಔಷಧ ವಸ್ತುವಾಗಿ ಪ್ರಸಿದ್ಧಿ ಪಡೆದಿದೆ. ಚರ್ಮದ ಸಮಸ್ಯೆ, ರಕ್ತ ಶುದ್ದಿ, ಜೀರ್ಣಶಕ್ತಿ ಮುಂತಾದವುಗಳಿಗೆ ರಾಮಬಾಣವಾಗಿರುವ ಜೇನು ತುಪ್ಪ ಹಳೆಯದಾದಷ್ಟು ಒಳ್ಳೆಯದು.
ರಕ್ತಸಂಚಾರವನ್ನು ಸರಾಗವನ್ನಾಗಿಸುವ ಜೇನು ತುಪ್ಪ ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ಸಕ್ಕರೆಗಿಂತ ಒಳ್ಳೆಯದು. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ನಿಯಂತ್ರಿಸುವ ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ಜೇನುತುಪ್ಪ ಸೇವಿಸುವುದರಿಂದ ಸಮಸ್ಯೆ ದೂರಾಗುವುದು. ಗಾಯದ ಮೇಲೆ ಜೇನುತುಪ್ಪವನ್ನು ಹಚ್ಚುವುದರಿಂದ ಗಾಯ ಬಹುಬೇಗನೇ ವಾಸಿಯಾಗುತ್ತದೆ. ಪ್ರತಿದಿನ ಬಿಸಿನೀರಿಗೆ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರಿಗೆ ಜೇನು ಹಾಕಿ ಕಲಸಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ಸಹಕಾರಿ.