ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಕೆರಗೋಡು ಹಾಗೂ ಮಂಡ್ಯ ಬಂದ್ ಗೆ ಶ್ರೀರಾಮಭಜನಾ ಮಂಡಳಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳು ಕರೆ ನೀಡಿವೆ.
ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಜನವರಿ 28ರಂದು ಅರ್ಜುನ ಧ್ವಜಸ್ತಂಭದ ಮೇಲೆ ಹಾರಿಸಿದ್ದ ಹನುಮ ಧ್ವಜವನ್ನ ಇಳಿಸಿ, ತ್ರಿವರ್ಣ ಧ್ವಜವನ್ನ ಜಿಲ್ಲಾಡಳಿತ ಹಾರಿಸಿತ್ತು. ಇದನ್ನ ವಿರೋಧಿಸಿ ಬಿಜೆಪಿ, ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೃಹತ್ ಹೋರಾಟವನ್ನ ನಡೆಸಿದ್ದರು.
ಜಿಲ್ಲಾಡಳಿತ ಬಂದ್ ಕೈಬಿಡುವಂತೆ ಮನವಿ ಮಾಡಿದರೂ ಖ್ಯಾರೆ ಎನ್ನದ ಹಿಂದೂಪರ ಸಂಘಟನೆಗಳು ನಾಳೆ ಬಂದ್ ನಡೆಸಲು ಮುಂದಾಗಿವೆ. ಈ ಹಿನ್ನೆಲೆ, ಇಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಸಭೆ ಕರೆದಿದ್ದು, ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಪ್ರತಿಭಟನೆಯಲ್ಲಿ ಕೈಜೋಡಿಸಿದ್ದ ಮೈತ್ರಿ ಪಕ್ಷ ಜೆಡಿಎಸ್ ಮಂಡ್ಯ ಬಂದ್ನಿಂದ ಅಂತರ ಕಾಯ್ದುಕೊಂಡಿದೆ.
ವಿವಾದ ಪ್ರಾರಂಭದಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳಿಗೆ ಜೆಡಿಎಸ್ ಸಾಥ್ ನೀಡಿತ್ತು. ಜೊತೆಗೆ ದಳ ನಾಯಕರು ಪಾದಯಾತ್ರೆ ಮಾಡಿದ್ದರು. ಆನಂತರ ಹೋರಾಟದಿಂದ ಜೆಡಿಎಸ್ ಹಿಂದೆ ಸರಿದಿದೆ. ಅದಾಗ್ಯೂ, ಬಿಜೆಪಿ ಜೆಡಿಎಸ್ ಬಿಟ್ಟು ಮನೆ ಮನೆಗೆ ಹನುಮ ಧ್ವಜ ಕಟ್ಟುವ ಅಭಿಯಾನ ನಡೆಸುತ್ತಿದೆ.