ಆನೇಕಲ್, ಡಿ. 26 : ತಾಲೂಕಿನ ನಾಗನಾಯಕನಹಳ್ಳಿ ನಿವಾಸಿ ಗೌರಮ್ಮ (65ನೇ ರ್ಯಾಂಕ್) ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತಹಸೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ನಾಗನಾಯಕನಹಳ್ಳಿಯ ದಿವಂಗತ ಡಿ.ಪಿಲ್ಲಣ್ಣ ಮತ್ತು ಕೃಷ್ಣಮ್ಮ ದಂಪತಿಯ ಏಳು ಪುತ್ರಿಯರಲ್ಲಿ ಕೊನೆಯವರಾಗಿರುವ ಗೌರಮ್ಮ ಅಂಗವಿಕಲೆ. ಬಡ ರೈತ ಕುಟುಂಬದ ಮನೆಯಲ್ಲಿ ಹಲವು ತೊಂದರೆಗಳಿದ್ದರೂ ಎಲ್ಲವನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ತಹಸೀಲ್ದಾರ್ ಹುದ್ದೆಗೆ ಆಯ್ಕೆಯಾಗಿರುವ ಆದೇಶ ಪ್ರತಿ ಡಿ.23ರಂದು ಗೌರಮ್ಮ ಅವರ ಕೈ ಸೇರಿದೆ.
ತಂದೆ ಪಿಲ್ಲಣ್ಣ ಬದುಕಿದ್ದಾಗ ನೀನು ಖಂಡಿತ ಸಾಧನೆ ಮಾಡುತ್ತೀಯಾ ಎನ್ನುತ್ತಿದ್ದರು. ಭಾವ ಸೋಮಶೇಖರ್ ಸಹಾಯ ಮತ್ತು ಕುಟುಂಬದ ಸಂಪೂರ್ಣ ನೆರವು ಸಾಧನೆಗೆ ಕಾರಣವಾಯಿತು. ಶಾಲೆಯಲ್ಲಿ ಕೆಲಸ ಮಾಡಿಕೊಂಡು ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಓದುತ್ತಿದ್ದೆ. ಪತಿ ಮಾದೇಶ್ ಸಹಕಾರವೂ ದೊಡ್ದಮಟ್ಟದಲ್ಲಿದೆ ಎನ್ನುತ್ತಾರೆ ಗೌರಮ್ಮ. ಆನೇಕಲ್ನ ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿರುವ ಗೌರಮ್ಮ, ಇಗ್ಗಲೂರು ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.