ಶ್ರೇಷ್ಠ ಶಿಷ್ಯ ಬಳಗ ಬೆಳೆಸಿದ ಜಿಎಸ್ಎಸ್: ಎಸ್‌ಜಿಸಿ

ಶ್ರೇಷ್ಠ ಶಿಷ್ಯ ಬಳಗ ಬೆಳೆಸಿದ ಜಿಎಸ್ಎಸ್: ಎಸ್‌ಜಿಸಿ

ಬೆಂಗಳೂರು: ಶ್ರದ್ಧೆ, ಗುಣಗಳಿರುವ ಶಿಷ್ಯ ಬಳಗ ಬೆಳೆಸಿದವರು ರಾಷ್ಟ್ರ ಕವಿ ಜಿ.ಎಸ್.ಎಸ್. ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ನಗರದಲ್ಲಿಂದು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾಕ್ಟರ್ ಜಿ.ಎಸ್.ಶಿವರುದ್ರಪ್ಪ ಅವರ ಬರಹಗಳ ಹೊಸ ಓದು ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿ.ಎಸ್.ಎಸ್. ವೈಚಾರಿಕತೆ ನೆಲೆಗಟ್ಟಿನಲ್ಲಿ ಸಾಹಿತ್ಯ ಬರೆದಿದ್ದಾರೆ ಎಂದ ಅವರು, ಓದು ಎಂದಿಗೂ ಕಳೆದು ಹೋಗಲ್ಲ. ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಮತ್ತಷ್ಟು ಕ್ರಿಯಾಶೀಲರಾಗಬೇಕು ಎಂದರು.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಮಾತನಾಡಿ, ಡಾ.ಜಿ.ಎಸ್.ಎಸ್.ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾರ್ಕ್ಸ್ ಸೇರಿದಂತೆ ಎಲ್ಲರ ಬಗ್ಗೆಯೂ ಸಮಗ್ರವಾಗಿ ಅಧ್ಯಯನ ಮಾಡಿ ಪಾಠ ಮಾಡುತ್ತಿದ್ದರು.ಇದರಿಂದ ಓದುಗನ ಸೆಳೆತ ಹೆಚ್ಚುತಿತ್ತು. ಅಂದು ವಿಶ್ವವಿದ್ಯಾಲಯಗಳು ಚಳವಳಿಗಳ ಕೇಂದ್ರ ಸ್ಥಾನವಾಗಿತ್ತು. ರೈತ, ದಲಿತ, ಬಂಡಾಯ ಸಾಹಿತ್ಯ ಸೇರಿದಂತೆ ಎಲ್ಲ ಚಳವಳಿಗಳಿಗಳಲ್ಲೂ ಪ್ರಮುಖ ಪಾತ್ರವಹಿಸಲಾಗುತಿತ್ತು. ಜಿ.ಎಸ್.ಎಸ್.ರನ್ನು ಆದರ್ಶವಾಗಿಟ್ಟುಕೊಂಡೇ ವಿವಿಯಲ್ಲಿ ಕನ್ನಡ ಅಧ್ಯಯನ ವಿಭಾಗ ಕಟ್ಟಿದ್ದೇವೆ. ಅವರು ಊಹಿಸಿದ್ದಕ್ಕಿಂತ ಭಿನ್ನವಾಗಿ ಅಧ್ಯಯನ ವಿಭಾಗ ಕಟ್ಟಬೇಕಿದ್ದು, ಅದು ಇಂದಿನ ಅನಿವಾರ್ಯ ಹಾಗೂ ಅಗತ್ಯ ಎಂದರು.
ನನ್ನನ್ನು ಗೋಕಾಕ್ ಚಳವಳಿಗೆ ಪರಿಚಯ ಮಾಡಿಸಿದ್ದು ಜಿ.ಎಸ್.ಎಸ್. ನಾನೊಂದು ವರ್ಷ ಮನೆ ಮಠ ಬಿಟ್ಟು ಅದರಲ್ಲಿ ಪಾಲ್ಗೊಂಡಿದ್ದೆ. ಅದರ ಹಿನ್ನೆಲೆಯೇ ನಾನಿಂದು ವಿವಿ ಕುಲಪತಿಯಾಗಲು ಸಾಧ್ಯವಾಗಿದೆ ಅನ್ನಿಸುತ್ತದೆ.ಅಷ್ಟೇ ಅಲ್ಲದೆ, ಜಿ.ಎಸ್. ಎಸ್.ಪರಿಚಯದಿಂದ ಹಲವರ ಪರಿಚಯವಾಯಿತು. ಲಂಕೇಶ್ ಮೇಷ್ಟ್ರು ಸೇರಿದಂತೆ ಹಲವರು ಜೊತೆ ಸಂಬಂಧ ಬೆಳೆಯಿತು ಎಂದು ನುಡಿದರು.
ಕರ್ನಾಟಕ ಸಂಘಕ್ಕೆ ೧೦೦ ವರ್ಷಗಳ ಸಂಭ್ರಮದಲ್ಲಿ ಇದೆ. ಅದರ ಭಾಗವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ಮಾಡಲಾಗಿದೆ. ಜೊತೆಗೆ, ರಾಷ್ಟ್ರದ ಎಲ್ಲ ಭಾಷೆಗಳನ್ನೊಳಗೊಂಡ ಕರ್ನಾಟಕ ಭಾಷಾ ಭವನ ಕಟ್ಟಬೇಕು ಎಂಬ ಉದ್ದೇಶವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ರಾಘವೇಂದ್ರ ರಾವ್ ಸೇರಿದಂತೆ ಪ್ರಮುಖರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos