ಬೆಂಗಳೂರು, ಮೇ. 3, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಂದಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾಲೇಜುಗಳಿಗೆ ಹಾಜರಾಗುತ್ತಿಲ್ಲ ಬದಲಿಗೆ ಖಾಸಗಿ ಟ್ಯೂಷನ್ ನಲ್ಲಿ ಕೆಲಸ ಮಾಡಿಕೊಂಡು ಸರಕಾರಿ ಸಂಬಳ ಪಡೆದುಕೊಳ್ಳುತ್ತಿದ್ದಾರೆ, ಇದರಿಂದ ಲಕ್ಷಾಂತರ ಮಕ್ಕಳಿಗೆ ಸರಿಯಾಗಿ ಪಠ್ಯ ಭೋಧನೆಯಾಗತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ.
ಅದಕ್ಕಾಗಿ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ಕಡ್ಡಾಯ ಹಾಜರಾತಿ ಮಾಡುವುದರ ಬಗ್ಗೆ ಪೂರ್ವ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದೆ.
ಇನ್ನು ಆಧಾರ್ ಆಧಾರಿತ ಆನ್ ಲೈನ್ ಬಯೋಮೆಟ್ರಿಕ್ ನಲ್ಲಿ ಹಾಜರಾತಿ ತೆಗೆದುಕೊಂಡಿರುವ ಕ್ರಮಕ್ಕೆ ಸಂಬಂಧಪಟ್ಟಂತೆ ಮೇ 4 ರೊಳಗೆ ಕಾಲೇಜುಗಳು ಮಾತೃ ಇಲಾಖೆಗೆ ವರದಿ ಮಾಡಬೇಕು ಎಂದು ಇಲಾಖಾ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ.