ತುಮಕೂರು: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳ ದುಸ್ಥಿತಿ ಹೇಳತೀರದ್ದಾಗಿದೆ. ಕೊಪ್ಪಳದ ಅಂಗನವಾಡಿಯೊಂದರಲ್ಲಿ ಕಟ್ಟಡದ ದುಸ್ಥಿತಿಯಿಂದಾಗಿ ಜೀವ ಭಯದಲ್ಲಿ ಮಕ್ಕಳನ್ನು ಮೈದಾನದಲ್ಲಿ ಕೂರಿಸಿ ಪಾಠ ಮಾಡುವಂತ ಸ್ಥಿತಿ ಇದೆ. ಇನ್ನು ಮತ್ತೊಂದೆಡೆ ತುಮಕೂರಿನಲ್ಲಿ ಅಂಗನವಾಡಿ ಇಲ್ಲದೆ ಅಕ್ಷರ ದಾಸೋಹ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುವಂತಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬ್ಯಾಡಗೆರೆ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಬಿರುಕು ಬಿಟ್ಟಿದ್ದು ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಹೀಗಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಕ್ಷರ ದಾಸೋಹದ ಚಿಕ್ಕ ಕೊಠಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
15 ಜನ ಮಕ್ಕಳಿರುವ ಅಂಗನವಾಡಿ ಕೇಂದ್ರ ದುಸ್ಥಿತಿಗೆ ಜಾರಿದೆ. ಈ ಮಕ್ಕಳಿಗೆ ಕೂರಲು ಸೂಕ್ತವಾಗಿ ಅಂಗನವಾಡಿ ಕಟ್ಟಡ ಇಲ್ಲ, ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಳೆ ಅಂಗನವಾಡಿ ಕೇಂದ್ರ ಈಗ ಹಾಳಾಗಿದೆ. ಇಂದೋ ನಾಳೆ ಬೀಳುವ ಪರಿಸ್ಥಿತಿಯಲ್ಲಿದೆ. ಬೀಳೊ ಪರಿಸ್ಥಿತಿ ಇರುವ ಕಾರಣ ಪಕ್ಕದಲ್ಲೆ ಇರುವ ಶಾಲೆಯ ಅಕ್ಷರ ದಾಸೋಹದ ಚಿಕ್ಕ ಕೊಠಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ಲಾಲನೆ ಪಾಲನೆ ಮಾಡಲಾಗುತ್ತಿದೆ.