ವಿಶಾಖಪಟ್ಟಣ, ಜು.22 : ಆಸ್ಪತ್ರೆ ಮತ್ತು ಊರಿನ ನಡುವೆ ರಸ್ತೆ ಸಂಪರ್ಕದ ಕೊರತೆಯಿಂದಾಗಿ ತುಂಬು ಗರ್ಭಿಣಿಯನ್ನು ಕುಟುಂಬಸ್ಥರು 6 ಕಿ.ಮೀ ಆಸ್ಪತ್ರೆಗೆ ಹೊತ್ತೊಯ್ದಿರುವ ಘಟನೆ ವಿಶಾಖಪಟ್ಟಣದ ಕೊತವಲ್ಸಾ ಗ್ರಾಮದಲ್ಲಿ ನಡೆದಿದೆ.
ಭಾನುವಾರ 9 ತಿಂಗಳ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕುಟುಂಬಸ್ಥರು ಆಂಬ್ಯುಲೆನ್ಸ್ಗೆ ಫೋನ್ ಮಾಡಿದ್ದಾರೆ. ಆದರೆ ವಾಹನದವರು ನಿಮ್ಮ ಗ್ರಾಮದ ರಸ್ತೆ ಸರಿಯಿಲ್ಲ ಅದಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಮರದ ಕಂಬಕ್ಕೆ ಕಟ್ಟಿದ ಬಟ್ಟೆಯಿಂದ ಮಾಡಿದ ತಾತ್ಕಾಲಿಕ ಸ್ಟ್ರೆಚರ್ನಲ್ಲಿ ಗರ್ಭಿಣಿಯನ್ನು ಗ್ರಾಮದಿಂದ 6 ಕಿ.ಮೀ. ಅಂತರದಲ್ಲಿರುವ ಕೆ.ಜೆ ಪುರಂ ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ. ಸರಿಯಾದ ಸಮಯಕ್ಕೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ.
ಸುಮಾರು ವರ್ಷಗಳಿಂದ ಗ್ರಾಮಕ್ಕೆ ರಸ್ತೆ ಹಾಗೂ ವಾಹನ ಸೌಲಭ್ಯವಿಲ್ಲ. ಅದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.