ಚಿತ್ರದುರ್ಗ, ಅ. 2 : ಗಾಂಧಿ ಜಯಂತಿ ಬಂತಂದ್ರೆ ದೇಶದೆಲ್ಲೆಡೆ ಮಹಾತ್ಮ ಗಾಂಧೀಜಿ ಭಾವಚಿತ್ರವಿಟ್ಟು ಪೂಜಿಸೋದು ವಾಡಿಕೆ. ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಗಾಂಧೀಜಿ ದೇಗುಲ ನಿರ್ಮಿಸಿ ನಿತ್ಯ ಪೂಜಾ ಕೈಂಕರ್ಯ ಮಾಡಲಾಗುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಅನೇಕ ಸ್ವತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ. ಇದೇ ತುರುವನೂರು ಗ್ರಾಮದಲ್ಲಿ ಈಚಲ ಮರದ ಚಳುವಳಿ ನಡೆದಿದೆ. ಹೀಗಾಗಿ ನೂರಾರು ಜನ ಸ್ವತಂತ್ರ ಹೋರಾಟಗಾರರು ಈ ಗ್ರಾಮದಿಂದಲೇ ಹೋರಾಟಕ್ಕೆ ಧುಮುಕಿದ್ದರು. ಆ ಹೋರಾಟದ ಸವಿನೆನಪಿಗಾಗಿ ಈ ತುರುವನೂರು ಗ್ರಾಮದಲ್ಲಿ ಸ್ವತಂತ್ರ್ಯ ಹೋರಾಟಗಾರರ ನೇತಾರ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ನಿರ್ಮಿಸಲಾಗಿದೆ. ಅಲ್ಲದೇ ಏಳು ಅಡಿ ಎತ್ತರದ ಗಾಂಧೀಜಿಯವರ ಕಂಚಿನ ಪ್ರತಿಮೆಯು ದೆಹಲಿಯಲ್ಲಿ ಬಿಟ್ಟರೆ, ಈ ತುರುವನೂರು ಗ್ರಾಮದಲ್ಲಿ ಮಾತ್ರ ಇರೋದು ಈ ದೇಗುಲದ ವಿಶೇಷ.