ಮಹದೇವಪುರ, ಸೆ. 21: ಸಂತ್ರಸ್ಥರ ಹೆಸರಿನಲ್ಲಿ ನ್ಯಾಯ ಬೆಲೆ ಅಂಗಡಿಯವರು ಪಡಿತರ ಕಡಿತಗೊಳಿಸಿ ದಲ್ಲದೆ 3 ತಿಂಗಳಿನಿಂದ ಸಮರ್ಪಕವಾಗಿ ಪಡಿತರ ವಿತರಿಸದೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಹದೇವಪುರ ಕ್ಷೇತ್ರದ ಹುಸ್ಕೂರು ಕೋಡಿಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಇಂತಹ ವಂಚನೆ ನಡೆದಿದ್ದು , ಬರ ಪರಿಹಾರ ಹೆಸರಿನಲ್ಲಿ ಕೆಲವರಿಗೆ ಮೂರು ಕೆ.ಜಿ, ನಾಲ್ಕು ಕೆ.ಜಿ ಅಕ್ಕಿ ಕಡಿತಗೊಳಿಸಿದ್ದರೆ ಇನ್ನು ಕೆಲವರಿಗೆ ಪಡಿತರವೇ ನೀಡದೆ ಸತಾಯಿಸಿದ್ದಾರೆ.
ಬೆರಳಚ್ಚು ಗುರುತನ್ನು ತೆಗೆದುಕೊಂಡು ಪಡಿತರ ನೀಡಿಲ್ಲ ಕಳೆದ ಮೂರು ತಿಂಗಳಿಂದ ಇದೆ ರೀತಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು
ಅಲ್ಲದೆ ತಿಂಗಳಲ್ಲಿ ಒಂದು ದಿನ ಕೇವಲ 3 ಗಂಟೆಗಳು ಮಾತ್ರ ಪಡಿತರ ನೀಡಲಾಗುತ್ತದೆ ಕೆಲಸಕ್ಕೇನಾದರೂ ಹೋಗಿದ್ದರೇ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಒಂಚೂರು ತಡವಾದರೇ ಕೇಂದ್ರದಲ್ಲಿ ಪಡಿತರ ಮುಗಿದಿದೆ ಬೇರೆ ಕೇಂದ್ರದಲ್ಲಿ ನೀಡುತ್ತೇವೆ ಅಲ್ಲಿಗೆ ಬನ್ನಿ ಅಂತಾರೆ. ಆದರೆ, ಯಾವುದೇ ಪಡಿತರ ಇದುವರೆಗೂ ನೀಡಿಲ್ಲ ಎಂದು ಹೇಳಿದರು.
ಸಮಸ್ಯೆ ಬಗ್ಗೆ ಸಾರ್ಜನಿಕರಿಂದ ದೂರುಗಳು ಬಂದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಮಂಡೂರು ಜಿಲ್ಲಾ ಪಂಚಾ ಸದಸ್ಯ ಕೆಂಪರಾಜು, ಪಡಿತರ ವಿತರಣ ಕೇಂದ್ರದವರನ್ನು ತರಾಟೆಗೆ ತೆಗೆದುಕೊಂಡರು, ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮಂಡೂರು ಜಿಪಂ ವ್ಯಾಪ್ತಿಯಲ್ಲಿ ಯಾವುದೇ ಅವ್ಯವಹಾರ ವಾಗುವುದಕ್ಕೆ ಬಿಡುವುದಿಲ್ಲ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ನೇರವಾಗಿ ಬಡವರಿಗೆ ತಲುಪಬೇಕು. ಇಂತಹ ಕೆಲಸಕ್ಕೆ ಕೆಲ ಅಧಿಕಾರಿಗಳ ದುರಾಡಳಿತದಿಂದ ಸೌಲಭ್ಯ ದುರುಪಯೋಗವಾಗುತ್ತಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.