ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಹಾಗೂ ದೆಹಲಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಅಮಿತ್ ಭಂಡಾರಿ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ಈ ಘಟನೆ ದೆಹಲಿಯ ಸೇಂಟ್ ಸ್ಟೀಫನ್ ಶಾಲಾ ಮೈದಾನದಲ್ಲಿ ಟಿ-20 ಪಂದ್ಯಾವಳಿಗೆ ದೆಹಲಿ ಹಿರಿಯ ತಂಡದ ಆಯ್ಕೆ ಮಾಡುವ ವೇಳೆ ನಡೆದಿದ್ದು, ಹಾಕಿ ಸ್ಟಿಕ್ ಹಾಗೂ ಕಬ್ಬಿಣದ ಸಲಾಕೆಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಹಲ್ಲೆ ನಡೆದಾಗ ಭಂಡಾರಿಯವರನ್ನು ರಕ್ಷಿಸಲು ಮುಂದಾದಾ ವೇಳೆ ಶೂಟ್ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರಿಂದ ನಾವು ದೂರ ನಿಂತೆವು. ಭಂಡಾರಿ ಅವರು ಓಡಿ ಹೋಗಿದ್ದರಿಂದ ಹೆಚ್ಚು ಗಾಯವಾಗಿಲ್ಲ ಎಂದು ತಂಡದಲ್ಲಿದ್ದ ಆಟಗಾರನೊಬ್ಬ ಹೇಳಿದ್ದಾನೆ.
ಮೊದಲನೇ ಪಂದ್ಯ ಮುಗಿದು ಎರಡನೇ ಪಂದ್ಯ ಆರಂಭವಾಗುವ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹಾಗೂ ಬಿಷನ್ ಸಿಂಗ್ ಬೇಡಿ ಖಂಡಿಸಿದ್ದಾರೆ. ಹಲ್ಲೆಯಿಂದ ತಲೆ ಹಾಗೂ ಕಿವಿಗೆ ಹೊಡೆತ ಬಿದ್ದಿದ್ದು, ಕೂಡಲೇ ಸಂತ್ ಪರಮಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಕ್ರಿಕೆಟ್ ಅಕಾಡೆಮಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ದೆಹಲಿ ಕ್ರಿಕೆಟ್ ಅಧ್ಯಕ್ಷ ರಜತ್ ಶರ್ಮಾ ಪ್ರತಿಕ್ರಿಯಿಸಿದ್ದು, ಈ ರೀತಿಯಾಗಿರುವುದು ಖಂಡನೀಯ. ಭಂಡಾರಿ ಅವರ ಮೇಲೆ ಹಲ್ಲೆ ನಡೆಸಿರುವವರು ಯಾರು ಎನ್ನುವುದನ್ನು ತನಿಖೆ ನಡೆಸಲಾಗುವುದು. ಇದೇ ವಿಚಾರವಾಗಿ ಈಗಾಗಲೇ ದೆಹಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ತಪಿಸ್ಥತರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.