ಕೋಲಾರ: ಶಿಕ್ಷಕರು ನೇರ ಹೊಣೆಗಾರಿಕೆ ವಹಿಸಿಕೊಳ್ಳಿ, ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿ, ಕಲಿಕೆಗೆ ಪೂರಕವಾದ ಸುಂದರ ಪರಿಸರ ನಿರ್ಮಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ನರಸಾಪುರ ಕೆಪಿಎಸ್ ಶಾಲೆಯಲ್ಲಿ ನರಸಾಪುರ, ವಕ್ಕಲೇರಿ ಹೋಬಳಿಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಗ್ರಾಮ ಶಿಕ್ಷಣ ಪಡೆ ರಚನೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಶಾಲೆಗಳ ಅಭಿವೃದ್ದಿ ಕುರಿತು ಮಾತನಾಡಿದರು. ಗ್ರಾಮೀಣಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಾದ ಉಮಾಮಹದೇವನ್ ಹಾಗೂ ಜಿಪಂ ಸಿಇಒ ರವಿಕುಮಾರ್ ಅವರು ಗ್ರಾಮ ಶಿಕ್ಷಣ ಪಡೆ ರಚನೆ, ಶಾಲೆಗಳ ಅಭಿವೃದ್ದಿ ಕುರಿತು ನಿರ್ದೇಶನ ನೀಡಿದ್ದು, ಅದರಂತೆ ನೀವು ಕಾರ್ಯೋನ್ಮುಖರಾಗಿ ಎಂದು ಸೂಚಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಮಾತನಾಡಿ ಗ್ರಾಮ ಶಿಕ್ಷಣ ಪಡೆ ಗ್ರಾ.ಪಂ ರಚಿಸಿದರೂ ದಾಖಲೆ ನೀವು ನಿರ್ವಹಿಸಿ, ಓದುವ ಬೆಳಕು ಕಾರ್ಯಕ್ರಮದಡಿ ಶಾಲೆಗೆಬಾರದೆ ಮನೆಯಲ್ಲಿ ಇರುವ ಮಕ್ಕಳು ಗ್ರಾ.ಪಂ ಗ್ರಂಥಾಲಯ ಬಳಸಿಕೊಳ್ಳಲು ತಿಳಿಸಿ, ಗ್ರಂಥಾಲಯ ಸದಸ್ಯತ್ವ ಅಭಿಯಾನ ಶಿಕ್ಷಕರು ಮಾಡಿ. ಗ್ರಾ.ಪಂನಿಂದ ಮಕ್ಕಳ ಹಕ್ಕುಗಳ ಸಭೆ ನಡೆಸಿ, ಜಲಜೀವನ್ ವಿಷನ್ನಿಂದ ಶಾಲೆಗಳಲ್ಲಿನ ನೀರು ಸಂಪರ್ಕಕ್ಕೆ ೨೦ ಸಾವಿರ ರೂ ನೀಡುತ್ತಿದ್ದು, ಶಾಲೆಯ ಶೌಚಾಲಯ, ಅಡುಗೆ ಮನೆಗೆ ಅಗತ್ಯವಿರುವ ನಳ ಸಂಪರ್ಕ ಹಾಕಿಸಿಕೊಳ್ಳಿ. ಇಂಗು ಗುಂಡಿ ನಿರ್ಮಾಣ, ಸಾವಯಲ ಗೊಬ್ಬರ ತೊಟ್ಟಿ ನಿರ್ಮಾಣ ಗ್ರಾ.ಪಂನಿಂದ ಮಾಡಿಸಿಕೊಳ್ಳಿ, ಮಳೆಕೊಯ್ಲು ಮಾಡಿಸಿ ಎಂದು ಸಲಹೆ ನೀಡಿದರು.