ನಾಗಮಂಗಲ, ಅ. 25 : ಚಿರತೆ ಪ್ರತ್ಯಕ್ಷವಾಗಿರುವ ವಿಷಯ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು ಅವರ ನಿರ್ಲಕ್ಷ್ಯದಿಂದ ಹತ್ತು ಕುರಿಗಳು ಸಾವನ್ನವೆ ಎಂದು ಕುರಿಗಾಹಿ ಸರೇಶ ಆರೋಪಿಸಿದ್ದಾರೆ. ಎಂದಿನಂತೆ ತಮ್ಮ ಕುರಿಗಳನ್ನು ಮನೆಯ ಮುಂದೆ ಇರುವ ಕೊಟ್ಟಿಗೆಯಲ್ಲಿ ಕೂಡಿ ಹಾಕಿದೆ. ಇದನ್ನೇ ಹೊಂಚು ಹಾಕುತ್ತಿದ್ದ ಚಿರತೆ ತಡ ರಾತ್ರಿ ಕೊಟ್ಟಿಗೆಗೆ ನುಗ್ಗಿ ಎಂಟು ಕುರಿಗಳನ್ನು ಕಚ್ಚಿ ರಕ್ತ ಹೀರಿ ಸಾಯಿಸಿದೆ. ಇನ್ನೆರಡು ಕುರಿಗಳನ್ನು ಹೊತ್ತುಕೊಂಡು ಹೋಗಿ ಗ್ರಾಮದ ಹೊರ ವಲಯದಲ್ಲಿ ತಿಂದು ಹಾಕಿದೆ. ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದರು.
ಅರಣ್ಯ ಇಲಾಖೆಯ ನಿರ್ಲಕ್ಷ್ಯ: ಬೋರಿಕೊಪ್ಪಲು ಮತ್ತು ಸುತ್ತ ಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತದೆ. ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ ಪರಿಣಾಮವೇ ಘಟನೆಗೆ ಕಾರಣವಾಗಿದೆ ಎಂದು ರೈತ ಸುರೇಶ್ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆಯಿಂದ ಭಯಭೀತರಾಗಿರುವ ಬೋರಿಕೊಪ್ಪಲು, ಕಲ್ಲಿನಾಥಪುರ, ದೊಡ್ಡ ಯಗಟಿ, ಚಿಕ್ಕಯಗಟಿ, ಕರಡಹಳ್ಳಿ ಗ್ರಾಮಸ್ಥರು ತಮ್ಮ ಹೊಲ ಗದ್ದೆಗಳಿಗೆ ಹೊಗಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಚಿರತೆ ಹಿಡಿಯಲು ಕ್ರಮ ವಹಸಿಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.