ಹುಳಿಯಾರು:ಗೌರಿಗಣೇಶ ಹಬ್ಬದ ಅಂಗವಾಗಿ ಫಿನ್ಕೇರ್ ಬ್ಯಾಂಕ್ನಿಂದ ಹುಳಿಯಾರು ಹೋಬಳಿಯ ಮಹಿಳಾ ಸಂಘದ ಸದಸ್ಯರಿಗೆ ಫುಡ್ಕಿಟ್ ವಿತರಿಸಲಾಯಿತು.
ಹುಳಿಯಾರು ಹೋಬಳಿಯ ಸಿಂಗಾಪುರ, ಹೊಸಹಳ್ಳಿ, ಯಳನಾಡು ಗ್ರಾಮಗಳ ಸುಮಾರು ನೂರಕ್ಕೂ ಹೆಚ್ಚು ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಅಗತ್ಯವಾದ ದಿನಸಿ ನೀಡಲಾಯಿತು.
ಫಿನ್ ಕೇರ್ ಬ್ಯಾಂಕ್ನ ರೀಜನಲ್ ಮ್ಯಾನೇಜರ್ ಸಿದ್ಧನಾಯ್ಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕೋವಿಡ್-೧೯ ಅಟ್ಟಹಾಸದಿಂದ ಜನಜೀವನವೇ ಬದಲಾಗಿದೆ. ದಿನಕೂಲಿ ನಂಬಿ ಬದುಕು ಕಟ್ಟಿಕೊಂಡಿದ್ದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ನೆರವಾಗುವ ನಿಟ್ಟಿನಲ್ಲಿ ಅಳಿಲು ಸೇವೆ ಎನ್ನುವಂತೆ ಫುಡ್ಕಿಟ್ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತೊಷ್ಟು ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಕೊರೋನಾಕ್ಕೆ ಲಸಿಕೆ ಕಂಡುಹಿಡಿಯುವವರೆವಿಗೂ ಜನರಲ್ಲಿ ಭೀತಿ ಇದ್ದೇ ಇರುತ್ತದೆ. ಹಾಗಾಗಿ ಕೊರೊನಾ ಜೊತೆ ಹೊಂದಿಕೊಂಡು ಜೀವನ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ. ರೋಗನಿರೋಧಕ ಶಕ್ತಿ ವೃದ್ಧಿಸುವ ಆಹಾರ ಬಳಸುವಂತೆಯೂ, ಬಿಸಿ ನೀರು ಕುಡಿಯುವಂತೆಯೂ, ಹೊರಗಿನಿಂದ ಬಂದ ತಕ್ಷಣ ಕೈಕಾಲುಮುಖ ತೊಳೆದು ಮನೆ ಪ್ರವೇಶಿಸುವಂತೆಯೂ ಸಲಹೆ ನೀಡಿದರು.