ಆರ್.ಟಿ.ಪಿ.ಎಸ್. ಘಟಕದಿಂದ ಹಾರೋಬೂದಿ ಅಕ್ರಮದ ವಾಸನೆ 5 ಲಾರಿ ಸೀಜ್​

ಆರ್.ಟಿ.ಪಿ.ಎಸ್. ಘಟಕದಿಂದ ಹಾರೋಬೂದಿ ಅಕ್ರಮದ ವಾಸನೆ 5 ಲಾರಿ ಸೀಜ್​

ರಾಯಚೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್:  ರಾಯಚೂರಿನ ವಿದ್ಯುತ್ ಶಾಖೋತ್ಪನ್ನ ಕೇಂದ್ರದ ಹಾರೋಬೂದಿ ಸಾಗಣೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಆರ್​ಟಿಪಿಎಸ್ ಘಟಕದಿಂದ ದಾಖಲೆಯಿಲ್ಲದೆ ಹಾರೋಬೂದಿಯನ್ನ ಸರಬರಾಜು ಮಾಡುತ್ತಿದ್ದ ಲಾರಿಗಳನ್ನು ಆರ್​ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯನ್ನ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಕೇಂದ್ರವೆಂದು ಗುರುತಿಸಲಾಗಿದೆ. ಇಲ್ಲಿನ ವಿದ್ಯುತ್ ಶಾಖೋತ್ಪನ್ನ ಕೇಂದ್ರದಲ್ಲಿ ಹಾರೋಬೂದಿ ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ಇಂದು ಕೂಡಾ ನಡೆದಿದೆ. ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಆರ್​ಟಿಪಿಎಸ್) ಶೇ.40ರಷ್ಟು ವಿದ್ಯುತನ್ನು ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸುವ ಹೆಗ್ಗಳಿಕೆ ಪಡೆದಿದೆ. ಆದ್ರೆ ಈ ಕೇಂದ್ರದಲ್ಲಿ ಈಗ ಅಕ್ರಮ ದಂಧೆ ನಡೆದಿದೆ ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ. ವಿದ್ಯುತ್ ಉತ್ಪಾದನೆಯಿಂದ ಹೊರ ಬರುವ ಹಾರೋಬೂದಿಯನ್ನ ನಿಯಮಗಳ ಪ್ರಕಾರ ಅನುಮತಿಯೊಂದಿಗೆ ಸಾಗಿಸಬೇಕು. ಆದ್ರೆ 13 ಲಾರಿಗಳಲ್ಲಿ ಸಾಗಿಸುತ್ತಿದ್ದ ಲಾರಿಗಳ ಪೈಕಿ, 5 ಲಾರಿಗಳಲ್ಲಿ ಯಾವುದೇ ದಾಖಲೆಯಿಲ್ಲದೆ ರಾಜ್ಯ ಹಾಗೂ ಅಂತಾರಾಜ್ಯಕ್ಕೆ ಸಾಗಣಿಕೆ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಆರ್​ಟಿಪಿಎಸ್​ನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಶಂಕೆ ಮೂಡಿದೆ. ಹಾರೋಬೂದಿಯನ್ನ ಲಾರಿಯ ಟ್ಯಾಂಕರ್ ಮೂಲಕ ಸಾಗಣಿಸಬೇಕು. ಯಾಕೆಂದ್ರ ಈ ಬೂದಿ ಗಾಳಿಯಲ್ಲಿ ಹರಡಿದ್ರೆ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೂ ದುಷ್ಪಾರಿಮ ಬೀರುತ್ತದೆ. ಆದ್ರೆ ಲಾರಿಗಳಲ್ಲಿ ಈ ಹಾರೋ ಬೂದಿಯನ್ನ ಸಾಗಿಸಲಾಗಿದೆ. ಅದರಲ್ಲಿ ಓವರ್​​ಲೋಡ್ ಹಾಕಿಕೊಂಡು ಲಾರಿಯಲ್ಲಿ ಬೂದಿಯನ್ನ ಕೊಂಡೊಯ್ಯುವುದನ್ನ ಗಮನಿಸಿದ ಸ್ಥಳೀಯ ಜೈ ಕರ್ನಾಟಕ ರಕ್ಷಣ ವೇದಿಕೆ ಸಂಘಟನೆ ಮುಖಂಡರು ಮತ್ತು ಸ್ಥಳೀಯರು ಲಾರಿ ನಿಲ್ಲಿಸಿ, ರಾಯಚೂರು ಸಾರಿಗೆ ಅಧಿಕಾರಿ(ಆರ್​ಟಿಒ)ಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಸಾರಿಗೆ ಅಧಿಕಾರಿ 13 ಲಾರಿಗಳನ್ನ ತಪಾಸಣೆ ನಡೆಸಿದ್ದಾರೆ. 8 ಲಾರಿಗಳಲ್ಲಿ ನಿಯಮ ಪ್ರಕಾರವಾಗಿ ಲೋಡ್ ಮಾಡಲಾಗಿದ್ದು, ಸರಿಯಾದ ದಾಖಲೆಗಳೂ ಇವೆ. ಇನ್ನುಳಿದ 5 ಲಾರಿಗಳಲ್ಲಿ ಓವರ್​ಲೋಡ್ ಪತ್ತೆಯಾಗಿದೆ. ಅಲ್ಲದೆ ಸರಿಯಾದ ದಾಖಲೆಗಳೂ ಇಲ್ಲ. ಹೀಗಾಗಿ ಲಾರಿ ಚಾಲಕರು ಕೂಡಾ ಪರಾರಿಯಾಗಿದ್ದಾರೆ. ಇನ್ನು ಹಾರೋಬೂದಿಯಲ್ಲಿ ಅಕ್ರಮ ಸಾಗಣಿಕೆ ಕುರಿತಾಗಿ ಕೆಲ ದಿನಗಳ ಹಿಂದೆ ಅಧಿಕಾರಿಗಳನ್ನ ಅಮಾನತುಗೊಳಿಸಿದ್ದರೆ, ಇನ್ನು ಕೆಲವರನ್ನ ಆರ್​ಟಿಪಿಎಸ್ ಘಟಕದಿಂದ ವೈಟಿಪಿಎಸ್​ಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಆರ್​ಟಿಪಿಎಸ್​ನಲ್ಲಿ ಅಕ್ರಮ ಕಂಡುಬಂದಿರುವುದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಅಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಾರೋಬೂದಿಯನ್ನ ಹಣದಾಸೆಗೆ ಬಾಯ್ಬಿಟ್ಟು ಆರ್​ಟಿಪಿಎಸ್​ನ ಕೆಲ ಅಧಿಕಾರಿಗಳು ಇಂತಹ ಅಕ್ರಮ ದಂಧೆಗಳನ್ನು ನಡೆಸಿದ್ದಾರೆ ಎನ್ನುವ ಶಂಕೆ ಮೂಡಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ನಷ್ಟ ತಪ್ಪಿಸಬೇಕಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕ ಒತ್ತಾಯವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos