ಬೀದರ್: ಪುಷ್ಪಗಳಿಂದ ತಯಾರಿಸಿದ ಬೀದರ್ ಜಿಲ್ಲೆಯ ಗುಂಬಜ್, ಗವಾನ್ ಮದರಸಾ, ತರಕಾರಿಗಳಲ್ಲಿ ಕೆತ್ತನೆ ಮಾಡಲಾದ ಚಿತ್ರಕಲೆಗಲು, ಗರಿ ಬಿಚ್ಚಿ ನಿಂತಿರುವ ನವಿಲು ಪ್ರತಿರೂಪ, ಬೃಹತ್ ಆಕಾರದ ಅಣಬೆಗಳು ಜನರ ಮನಸ್ಸನ್ನು ಆಕರ್ಷಿಸಿದವು.
ಜಿಲ್ಲಾ ಪಂಚಾಯತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಬೀದರ್ ಕೃಷಿ ವಿಜ್ಞಾನ ಕೇಂದ್ರದಿಂದ ಜನವಾಡಾ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಿಸಾನ್ ಮೇಳ ಮತ್ತು ಫಲ ಪುಷ್ಪ ಪ್ರದರ್ಶನ ನಡೆಯಿತು.
ಕೃಷಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸೆರಿದ್ದವು ಹಾಗೂ ಪ್ರಗತಿಪರ ರೈತರಿಂದ ಮಳಿಗೆಗಳನ್ನು ಹಾಕಲಾಗಿತ್ತು.
ವಿನೂತನ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಸಸ್ಯ ಸಂರಕ್ಷಣಾ ಉಪಕರಣಗಳು, ಲೇವಲರ್, ವಿವಿಧ ಆಹಾರ ಪದಾರ್ಥಗಳ ಸುಧಾರಿತ ಬೀಜಗಳು, ಕಬ್ಬಿನ ಬೀಜಗಳ ಪ್ರದರ್ಶನವನ್ನು ರೈತರು ಉತ್ಸಾಹದಿಂದ ನೋಡಿ ಮಾಹಿತಿ ಪಡೆದುಕೊಂಡರು.
ಮೇಳವನ್ನು ಉದ್ಘಾಟಿಸಿದ ಭಗವಂತ ಖೂಬಾ ಅವರು, ‘ರೈತರಿಗಾಗಿ ಸರ್ಕಾರವು ಮಣ್ಣು ಆರೋಗ್ಯ, ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸೇರಿದಂತೆ ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಎಲ್ಲಾ ಯೋಜನೆಗಳ ಲಾಭ ಪಡೆಯಬೇಕು’ ಎಂದು ಕರೆ ನೀಡಿದರು.