ಶಿವಮೊಗ್ಗ, ಅ. 1: ಶಿವಮೊಗ್ಗ ಜಿಲ್ಲೆಯ ಹಾಗೂ ನಗರದ ನಾಗರಿಕರು ಇನ್ನು 2 ವರ್ಷಗಳಲ್ಲಿ ಶಿವಮೊಗ್ಗದ ಚಿತ್ರಣ ನೋಡಿ ಬೆರಗಾಗುವಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುಮಾರು 293 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಬಹಳ ವರ್ಷಗಳ ಹಿಂದೆ ವಿಮಾನ ನಿಲ್ದಾಣ ಮಾಡಲು ಹಣ ಬಿಡುಗಡೆ ಮಾಡಿದ್ದೆ. ಆದರೆ, ಅದು ಯಾಕೋ ಬೇರೆ ಸರ್ಕಾರಗಳು ಅದರ ಬಗ್ಗೆ ಹೆಚ್ವು ಆಸಕ್ತಿ ತೋರಿಸಲಿಲ್ಲ. ಇನ್ನು 9 ತಿಂಗಳಲ್ಲಿ ಶಿವಮೊಗ್ಗದಲ್ಲಿ ವಿಮಾನ ಹಾರಾಡಲಿದೆ ಎಂದು ಭರವಸೆ ನೀಡಿದರು.
ಶಿವಮೊಗ್ಗದ ಜೊತೆಗೆ ಬೇರೆ ಜಿಲ್ಲೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಜನವರಿಯಲ್ಲಿ ಹೊಸ ಬಜೆಟ್ ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯ ಬಜೆಟ್ ಮಂಡಿಸುತ್ತೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಒಂದು ವಾರದ ಒಳಗಾಗಿ ಪ್ರಾರಂಭವಾಗಲಿದೆ. ಶಿವಮೊಗ್ಗ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು. ವರ್ತುಲ ರಸ್ತೆ ನಿರ್ಮಾಣದಿಂದ ಅಕ್ಕಪಕ್ಕದ ಜಮೀನುಗಳ ಬೆಲೆ ಹೆಚ್ಚಿ, ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.