ಬೆಂಗಳೂರು: ಸಾಮಾನ್ಯ ಜನರು ಅವರು ಪ್ರಯಾಣ ಮಾಡಲು ಅತಿ ಹೆಚ್ಚಾಗಿ ಬಳಸುವುದು ಎಂದರೆ ಅದು ರೈಲು. ದೇಶಾದ್ಯಂತ ರೈಲುಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರೈಲಿನಲ್ಲಿ ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸದಂತೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಸ್ಟವ್, ಮ್ಯಾಚ್ ಬಾಕ್ಸ್, ಸಿಗರೇಟ್ ಲೈಟರ್, ಪಟಾಕಿ ಸೇರಿದಂತೆ ಯಾವುದೇ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ಸೂಚಿಸಿದ್ದಾರೆ.
ರೈಲಿನಲ್ಲಿ ಪಟಾಕಿ ಮತ್ತು ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯ್ದೆಯಡಿ ಅಪರಾಧ ಎಂದು ಅವರು ಸೂಚಿಸಿದರು. ಮತ್ತು ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಚಲಿಸುವ ರೈಲುಗಳಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಪ್ರಯಾಣಿಕರು ಧೂಮಪಾನ ಮಾಡಬಾರದು ಎಂದು ಅವರು ರೈಲ್ವೆ ಇಲಾಖೆ ಈಗಾಗಲೆ ಸುತ್ತೋಲೆ ಹೊರಡಿಸಿದೆ.