ಬೆಂಗಳೂರು: ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಇಂದು ನಡೆದ ಕಾರ್ಯಕ್ರಮದಲ್ಲಿ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೊರುವ ಸಲುವಾಗಿ ಕ್ಯಾಂಡಲ್ ಹಚ್ಚಿ ಪ್ರಾರ್ಥಿಸಲಾಯಿತು.
ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ವೀರ ಯೋಧ ಮಂಡ್ಯದ ಗುರು ಅವರ ಕುಟುಂಬಕ್ಕೆ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಣ ಸಂಗ್ರಹಿಸಿ ಆರ್ಥಿಕ ನೆರವು ನೀಡುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಇಂದು ಸಹ ಸ್ಥಳದಲ್ಲೇ ಕೆಲವರು ದೇಣಿಗೆ ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಮಂಡಳಿ ಕಾರ್ಯದರ್ಶಿಗಳಾದ ಬಾ.ಮಾ.ಹರೀಶ್, ಶಿಲ್ಪಾ ಶ್ರೀನಿವಾಸ್, ಎಂ.ಜಿ.ರಾಮಮೂರ್ತಿ, ಖಜಾಂಚಿ, ಕೆ.ಎಂ.ವಿಲೇಶ್, ಸದಸ್ಯರಾದ ಬಾ.ಮಾ.ಗಿರೀಶ್, ಹಿರಿಯ ನಿರ್ದೇಶಕ ನಾಗಣ್ಣ, ಗಣೇಶ್, ಅನಿತಾರಾಣಿ, ಮಾಜಿ ಅಧ್ಯಕ್ಷರಾದ ಕೆ.ಸಿ.ಎನ್.ಚಂದ್ರಶೇಖರ್, ಕೆ.ವಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರದಿಂದ ಗುರು ಕುಟುಂಬಕ್ಕೆ 25 ಲಕ್ಷ, ಪತ್ನಿಗೆ ಸರ್ಕಾರಿ ಉದ್ಯೋಗ : ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಎಚ್ಡಿಕೆ ಘೋಷಣೆ ಮಾಡಿದ್ದಾರೆ. ನಗರದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರ ಬಂದಿದ್ದಾಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರು ಅವರಿಗೆ ಹೂಗುಚ್ಛವನ್ನಿಟ್ಟು ಅಂತಿಮ ನಮನ ಸಲ್ಲಿಸಿದ್ದಾರೆ.
ಈ ವೇಳೆ ಹುತಾತ್ಮ ಗುರು ಕುಟುಂಬಕ್ಕೆ ಪರಿಹಾರ ಧನವನ್ನು ಫೋಷಿಸಿದರು. ಹುತಾತ್ಮ ಗುರು ಕುಟುಂಬದ ಸಂಪೂರ್ಣ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.