ಬೆಂಗಳೂರು, ಅ. 19: 3ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಪ್ರತಿಭಟನೆ. ಮಳೆಯಲ್ಲಿಯೆ ರಾತ್ರಿಯಿಡಿ ರಸ್ತೆಯಲ್ಲಿ ಧರಣಿ ಕುಳಿತಿದ್ದ ಪರಿಣಾಮ ಮೂಲ ಸೌಕರ್ಯಗಳಿಲ್ಲದೆ ಮಹಿಳಾ ಹೋರಾಟಗಾರರು ಪರದಾಟ ನಡೆಸಿದರು. ಅಲ್ಲದೆ ಕೆಲವು ಮಹಿಳೆಯರಿಗೆ ಚಳಿ ಜ್ವರ ಶುರುವಾದ ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಸವದತ್ತಿ ಮೂಲದ ಗದಿಗೆಮ್ಮ ಎಂಬುವವರಿಗೆ ಜ್ವರ ತೀವ್ರವಾಗಿದೆ ಎಂದು ತಿಳಿದುಬಂದಿದೆ.
ಇಬ್ಭರು ಮಹಿಳೆಯರನ್ನ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ. ಕೆಲ ವಯಸ್ಸಾದ ಮಹಿಳಾ ಹೋರಾಟಗಾರರು ಹೊದಿಕೆಯಿಲ್ಲದೆ ರಾತ್ರಿ ಚಳಿಯಲ್ಲೇ ರೈಲ್ವೆ ನಿಲ್ದಾಣದಲ್ಲಿ ಮಲಗುವಂತಾಯಿತು.
ಮಳೆಯನ್ನು ಲೆಕ್ಕಿಸದೆ ಟರ್ಪಲ್ಸ್ ಹಿಡಿದು ಅಹೋರಾತ್ರಿ ಹೋರಟಗಾರರು ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕದ ಜನಪ್ರತಿನಿಗಳ ವಿರುದ್ದ ಹಾಗೂ ಸರ್ಕಾರದ ಧೋರಣೆಗೆ ಅನ್ನದಾತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಒಳಗೆ ನಮ್ಮ ಮನವಿ ಸ್ವೀಕರಿಸಲಿಲ್ಲ ಎಂದಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ವೀರೇಶ್ ಸೊಬರದಮಠ ಹೇಳಿದ್ದಾರೆ. ರಾಜ್ಯಪಾಲರು ನಮ್ಮ ಮನವಿಯನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಪತ್ರ ನೀಡಲಿ. ನೀರು ಬಿಟ್ಟು, ಆಹಾರ ಸೇವನೆ ನಿಲ್ಲಿಸಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನಾವು ಮಹಾತ್ಮ ಗಾಂಧೀಜಿ ಅವರ ತತ್ವವನ್ನು ಪಾಲಿಸಲಿದ್ದೇವೆ. ನಮ್ಮ ಮನವಿಯನ್ನು ಪಡೆದುಕೊಳ್ಳದಿದ್ದರೆ ಬೆಂಗಳೂರಿನಿಂದ ಹೊರಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.