ನವದೆಹಲಿ, ಏ. 16, ನ್ಯೂಸ್ ಎಕ್ಸ್ ಪ್ರೆಸ್ : ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಳಿಕ ಸೆರೆಯಾದರೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯಲ್ಲದೆ ಇದರ ಜೊತೆಗೆ ಕತ್ತಿಗೆ ಬಿಜೆಪಿ ಚಿನ್ಹೆಯುಳ್ಳ ವಸ್ತ್ರವನ್ನು ಹಾಕಿರುವ ಅಭಿನಂದನ್ ರನ್ನೇ ಹೋಲುವ ಫೋಟೋ ಒಂದನ್ನು ಹಾಕಲಾಗಿದೆ. ವೈರಲ್ ಆದ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿರುವ ಸುದ್ದಿ ಸಂಸ್ಥೆಯೊಂದು ಇದು ಫೇಕ್ ಎಂದು ಹೇಳಿದೆ. ಫೋಟೋವನ್ನು ಬಹು ಸೂಕ್ಷ್ಮವಾಗಿ ಪರಿಶೀಲಿಸಿರುವ ಸುದ್ದಿಸಂಸ್ಥೆ, ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿ ಈತ ಎಂದು ತಿಳಿಸಿದ್ದು, ಮುಖದಲ್ಲಿನ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರಿಸಬಾರದೆಂಬ ಕಾರಣಕ್ಕೆ ಆತನಿಗೆ ದೊಡ್ಡದಾದ ಕನ್ನಡಕವನ್ನು ಹಾಕಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಅಭಿನಂದನ್ ತಮಿಳುನಾಡು ಮೂಲದವರಾಗಿದ್ದು, ಅವರ ಮತ ಅಲ್ಲಿಯೇ ಇರುವ ಸಾಧ್ಯತೆ ಇದೆ. ಜೊತೆಗೆ ತಮಿಳುನಾಡಿನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿ. ಸೇವಾ ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯ ಫೋಟೋ ಹಾಕಿ ಆತನನ್ನೇ ವಿಂಗ್ ಕಮಾಂಡರ್ ಅಭಿನಂದನ್ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.