ಚಾಮರಾಜನಗರ, ನ. 22 : ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪರಿಸರವಾದಿ ಕೃಷ್ಣಮೂರ್ತಿ ಅವರು ಕಳೆದ ಒಂದು ದಶಕದಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮದುವೆಯಲ್ಲಿ ಬಂದ ಅತಿಥಿಗಳಿಗೆ ತಾಂಬೂಲದ ಜೊತೆ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಆದರೆ ಕೊಳ್ಳೇಗಾಲದಲ್ಲಿ ಮದುವೆಯಲ್ಲಿ ಬಂದ ಅತಿಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗಿಡಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಹಸಿರೇ ಉಸಿರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಕೃಷ್ಣಮೂರ್ತಿ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಹಾಗು ಬಂಧು- ಬಾಂಧವರಿಗೆ ತಟ್ಟೆ, ಲೋಟ ಮತ್ತಿತರ ಉಡುಗೊರೆ ಬದಲಿಗೆ ಗಿಡಗಳನ್ನು ನೀಡಿದರೆ ಹೇಗೆ ಎಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಕೊಳ್ಳೇಗಾಲದಲ್ಲಿ ನಡೆದ ತಮ್ಮ ಮಗಳು ಕಾವೇರಿಯ ಮದುವೆಗೆ ಬಂದ ಅತಿಥಿಗಳಿಗೆಲ್ಲಾ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಮಾವು, ಬೇವು, ನೇರಳೆ, ಸೀಬೆ, ನಿಂಬೆ, ಸಪೋಟ, ಹೊಂಗೆ ಮತ್ತಿತರ ಜಾತಿಯ ಗಿಡಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.