ಮಂಡ್ಯ, ನ. 27: ಇಂದು 3 ಪಕ್ಷಗಳು ಕೆ.ಆರ್.ಪೇಟೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿವೆ. ಹೀಗಾಗಿ ಕೆ.ಆರ್.ಪೇಟೆ ಉಪಚುನಾವಣೆ ಅಖಾಡ ರಂಗೇರಲಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಒಕ್ಕಲಿಗ ನಾಯಕರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕಿಳಿಯಲು ಸಜ್ಜಾಗಿದ್ಧಾರೆ. ಕೆ.ಆರ್.ಪೇಟೆ ತಾಲೂಕಿನ ಹಲವೆಡೆ ರೋಡ್ ಶೋ ನಡೆಸಲಿದ್ಧಾರೆ. ಬಳಿಕ ಕಿಕ್ಕೇರಿಯಲ್ಲಿ ಸಭೆ ನಡೆಸಲಿದ್ದು, ಮತಯಾಚನೆ ಮಾಡಲಿದ್ದಾರೆ.
ಇನ್ನು, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅಖಾಡಕ್ಕಿಳಿಯಲಿದ್ದಾರೆ. ಇಷ್ಟೇ ಅಲ್ಲದೇ, ಸಂಜೆ ವೇಳೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಕೆ.ಆರ್.ಪೇಟೆಗೆ ಆಗಮಿಸಿ ಮತಪ್ರಚಾರ ಮಾಡಲಿದ್ದಾರೆ. ಮಹಿಳಾ ಮತದಾರರ ಪರವಾಗಿ ಮಾಜಿ ಸಚಿವೆ ಉಮಾಶ್ರೀ ಕೂಡ ಮತಯಾಚನೆ ಮಾಡಲಿದ್ದಾರೆ.
ಬಿಜೆಪಿ ಪಕ್ಷದ ಪರವಾಗಿ ಕೇಂದ್ರ ಸಚಿವ ಸದಾನಂದಗೌಡ ಅಖಾಡಕ್ಕೆ ಇಳಿಯಲಿದ್ದಾರೆ. ಸಿ.ಪಿ.ಯೋಗೇಶ್ವರ್ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಪ್ರಚಾರ ನಡೆಸಲಿದ್ದಾರೆ.
ಒಕ್ಕಲಿಗರ ಮತ ಬೇಟೆಗೆ 3 ಪಕ್ಷಗಳು ಅಖಾಡಕ್ಕಿಳಿಯಲಿವೆ. ಒಕ್ಕಲಿಗರ ಕೋಟೆ ಭೇದಿಸಲು ಒಕ್ಕಲಿಗ ಕಲಿಗಳು ರಣತಂತ್ರ ಹೆಣೆದಿದ್ದಾರೆ. ಒಂದೇ ದಿನ 3 ಪಕ್ಷಗಳ ಪ್ರಮುಖ ಒಕ್ಕಲಿಗ ನಾಯಕರು ಅಖಾಡಕ್ಕೆ ಎಂಟ್ರಿ ಕೊಡಲಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಪ್ರತ್ಯೇಕವಾಗಿ ತಾಲೂಕಿನ ಹಲವು ಹೋಬಳಿ ಕೇಂದ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.