ಬೆಂಗಳೂರು:
ಶಿಕ್ಷಣ ಪಡೆದು ಉದ್ಯೋಗ ಸಿಗದೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಯುವಜನತೆಯನ್ನು ಬಜೆಟ್ ನಲ್ಲಿ ಪರಿಗಣಿಸದಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್( ಡಿವೈಎಫ್ಐ)
ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮುನೀರ್
ಕಾಟಿಪಳ್ಳ ಹೇಳಿದ್ದಾರೆ.
ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆಂಬ ಪೊಳ್ಳು ಭರವಸೆಯಂತೆ ಈ ಬಜೆಟ್ ಮಂಡನೆ ಕೂಡ ಚುನಾವಣೆಯ ಗಿಮಿಕ್ ಆಗಿದೆ. ಇಂತಹ ಗಿಮಿಕ್ ಗಳಿಂದ ಯುವಜನರನ್ನು ಮೋಸ ಮಾಡಲು ಇನ್ನು ಸಾಧ್ಯವಿಲ್ಲ ಎಂದು
ಟೀಕಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಕೋಟಿಗಟ್ಟಲೇ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ನಿರುದ್ಯೋಗಿಗಳಾಗುತ್ತಿದ್ದಾರೆ. 2017-18ರ ನಿರುದ್ಯೋಗ ದರ 45ವರ್ಷಗಳಲ್ಲೆ ಅತೀ ಹೆಚ್ಚು ಎಂಬ ಆಘಾತಕಾರಿ ಅಂಶ ಬಯಲಾಗಿದ್ದರೂ ಬಜೆಟ್ಟಿನಲ್ಲಿ ಯುವಜನರಿಗೆ ಉದ್ಯೋಗದ ಕುರಿತು ಸಮರ್ಪಕ ಯೋಜನೆ-ಅನುದಾನ ನೀಡದೆ ಕೇಂದ್ರ ಬಿಜೆಪಿ ಸರಕಾರ ದ್ರೋಹಗೈದಿದೆ.
ಹಾಗಾಗಿ ಈ ಬಜೆಟ್ ದೇಶದ ಯುವಜನ ವಿರೋಧಿಯಾಗಿದೆ. ಕೇವಲ ನಾಮಕಾವಸ್ಥೆಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಭೇತಿ ನೀಡುತ್ತೆವೆಂಬ ಬಜೆಟ್ ನ ಅಂಶವು ನಿರುದ್ಯೋಗದ ಸಮಸ್ಯೆ ಎದುರಿಸುವ ಯುವಜನತೆಯನ್ನು ಅಣಕಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಜನತೆ ತಮ್ಮ ಬದುಕು ಕಟ್ಟಿಕೊಳ್ಳಲು ಪೂರಕ ಅಂಶಗಳಿರದ ಈ ಬಜೆಟ್ ಯುವಜನರ ಪಾಲಿಗೆ ಸಂಪೂರ್ಣ ನಿರಾಸೆದಾಯಕವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್ಡಿಎಗೆ ತಕ್ಕ ಉತ್ತರ ನೀಡಲು ಯುವಜನತೆ ಸಜ್ಜಾಗಬೇಕಿದೆ.
ಬಸವರಾಜ್ ಪೂಜಾರ್,
ಡಿವೈಎಫ್ಐ ನ ರಾಜ್ಯ ಕಾರ್ಯದರ್ಶಿ