ಯಾದಗಿರಿ, ಅ. 30 : ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಜ್ಜಿಯ ಮುಂದೆಯೇ ಮೊಮ್ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಮಹಮ್ಮದ್ ಮುಬಾರಕ್(5) ಮೃತಪಟ್ಟ ಬಾಲಕ. ಜಿಲ್ಲೆಯ ಶಹಾಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ನೂರಬೇಗಂ ಎಂಬವರು ತಮ್ಮ 5 ವರ್ಷದ ಮೊಮ್ಮಗ ಮಹಮ್ಮದ್ ಮುಬಾರಕ್ ಜೊತೆ ರಸ್ತೆ ದಾಟುತ್ತಿದ್ದರು.
ಅದೇ ರಸ್ತೆ ಪಕ್ಕದಲ್ಲಿ ಕೆಎಸ್ಆರ್ ಟಿಸಿ ಬಸ್ಸೊಂದು ನಿಂತಿತ್ತು. ಅಜ್ಜಿ ಮತ್ತು ಮೊಮ್ಮಗ ರಸ್ತೆ ದಾಟುತ್ತಿರುವುದನ್ನು ಗಮನಿಸದ ಚಾಲಕ ಏಕಾಏಕಿ ಬಸ್ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಿಸಿದ ಹಿನ್ನಲೆ ಮೊಮ್ಮಗ ಮತ್ತು ಅಜ್ಜಿ ಬಸ್ ಚಕ್ರಕ್ಕೆ ಸಿಲುಕಿದ್ದು, ಬಾಲಕ ಮಹಮ್ಮದ್ ಮುಬಾರಕ್ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾನೆ. ನೂರಬೇಗಂಗೆ ಗಂಭೀರ ಗಾಯಾಗಳಾಗಿದೆ. ಸದ್ಯ ನೂರಬೇಗಂರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.